ಬೆಂಗಳೂರು: ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಯಲ್ಲಿ ತಪ್ಪಾಗಿ ಪ್ರಕಟವಾಗಿದ್ದ 5 ಪ್ರಶ್ನೆಗಳಿಗೆ ಒಟ್ಟು 9 ಕೃಪಾಂಕಗಳನ್ನು ನೀಡುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಹೈಕೋರ್ಟ್ಗೆ ಹೇಳಿಕೆ ಸಲ್ಲಿಸಿತು. ಇದನ್ನು ಆಧರಿಸಿ, ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಎಚ್.ಎಂ. ಕೌಶಿಕ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು.
ಗಣಿತ ಪ್ರಶ್ನೆ ಪತ್ರಿಕೆಯಲ್ಲಿದ್ದ 4, 11, 16, 17 ಮತ್ತು 26ಬಿ ಪ್ರಶ್ನೆಗಳನ್ನು ಉತ್ತರಿಸಲು ಯತ್ನಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಒಟ್ಟು 9 ಕೃಪಾಂಕಗಳನ್ನು ನೀಡುವುದಾಗಿ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಪೀಠಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿತು.
`ಮಾರ್ಚ್ 18ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಸಿದ್ಧಪಡಿಸಿಲ್ಲ. ಪರೀಕ್ಷೆಯನ್ನು ಪುನಃ ನಡೆಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿತ್ತು. `ಈ ರೀತಿಯ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಿ. ಒಂದು ಪ್ರಶ್ನೆ ತಪ್ಪಾಗಿ ಪ್ರಕಟವಾದರೂ, ಅದು ವಿದ್ಯಾರ್ಥಿಗಳನ್ನು ಅಧೀರರನ್ನಾಗಿ ಮಾಡುತ್ತದೆ' ಎಂದು ನ್ಯಾಯಮೂರ್ತಿಯವರು ಹೇಳಿದರು.