ಚಿತ್ರದುರ್ಗ: ‘ನಿನ್ನ ತಲೆ, ಬೇಜವಾಬ್ದಾರಿತನದಿಂದ ಉತ್ತರಿಸಿದರೆ ನೇಣು ಹಾಕ್ತೇನೆ ಹುಷಾರ್...’ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿ ಬಗ್ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಯೊಬ್ಬರ ವಿರುದ್ಧ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹರಿಹಾಯ್ದ ಪರಿ ಇದು.
ನೀರಿನ ಸಂಪುಗಳನ್ನು ನಿರ್ಮಿಸುವ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರು ನೀಡುತ್ತಿದ್ದ ಮಾಹಿತಿ ಗೊಂದಲ ಮೂಡಿಸಿದ್ದು ಸಚಿವರ ಅಸಮಾಧಾನಕ್ಕೆ ಕಾರಣವಾಯಿತು.
‘19 ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೂ, ಪ್ರಾರಂಭವಾಗಬೇಕಿರುವ ಶುದ್ಧ ಕುಡಿಯುವ ನೀರಿನ ಘಟಕ 2 ಎಂಬ ಮಾಹಿತಿ ನೀಡಿದ್ದೀಯ. ಇದರಲ್ಲಿ ಯಾವುದು ಸರಿ’ ಎಂದು ಪ್ರಶ್ನಿಸಿದರು.
ಅಧಿಕಾರಿಯ ಪ್ರತಿಕ್ರಿಯೆ ಕಂಡು ಮತ್ತಷ್ಟು ಸಿಟ್ಟಾದ ಸಚಿವರು, ‘ತಪ್ಪಾಗಿದ್ದರೆ ಒಪ್ಪಿಕೊಳ್ಳಿ. ಸುಳ್ಳು ಮಾಹಿತಿ ನೀಡಿದರೆ ಬರೆ ಎಳೆಯುವುದು ಗೊತ್ತು’ ಎಂದು ಎಚ್ಚರಿಕೆ ನೀಡಿದರು.
ಅವಾಚ್ಯ ಶಬ್ದ ಬಳಕೆ:ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳಲು ಸಚಿವರು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದರು. ಬಹುತೇಕ ಎಲ್ಲ ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ಮೇವು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರ ಜೊತೆ ಮಾತನಾಡುವಾಗ ಸಚಿವರು ‘ಬೋ...’ ಎಂದು ಶಬ್ದವನ್ನು ಅರ್ಧಕ್ಕೆ ತುಂಡರಿಸಿದರು.