ತಲಕಾವೇರಿ (ಕೊಡಗು ಜಿಲ್ಲೆ): ಜೀವನದಿ ಕಾವೇರಿ ಉಗಮ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಕಾವೇರಿ ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದಳು. ವರ್ಷಕ್ಕೊಮ್ಮೆ ನಡೆಯುವ ಈ ಕ್ಷಣಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ತೀರ್ಥೋದ್ಭವವಾದ ಬಳಿಕ ತೀರ್ಥ ಕೊಂಡೊಯ್ಯಲು ಭಕ್ತರು ಮುಗಿಬಿದ್ದರು. ಇದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. 18 ಮಂದಿ ಅರ್ಚಕರು ಮಹಾಪೂಜೆ ನೆರವೇರಿಸಿದರು. ಕುಂಕುಮಾರ್ಚನೆ, ಅಭಿಷೇಕ ನಡೆದ ಬಳಿಕ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉಕ್ಕಿದಳು. ಈ ಸಂದರ್ಭ ಜಯಘೋಷಗಳು ಮೊಳಗಿದವು.
ಚಿನ್ನಾಭರಣದೊಂದಿಗೆ ಕಾವೇರಿ ಮಾತೆ ಕಂಗೊಳಿಸುತ್ತಿದ್ದಳು. ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ನೇತೃತ್ವದಲ್ಲಿ ಸಂಪ್ರದಾಯಿಕ ಪೂಜೆಗಳನ್ನು ನೆರವೇರಿಸಲಾಯಿತು. ಅರ್ಚಕರಾದ ಅನಂತಕೃಷ್ಣಾಚಾರ್, ರಾಮಕೃಷ್ಣಾಚಾರ್, ನಾರಾಯಣಾಚಾರ್ ಪಾಲ್ಗೊಂಡಿದ್ದರು.
ಗೀತಗಾಯನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಡಗು ಏಕೀಕರಣ ರಂಗವು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿತ್ತು. ಜತೆಗೆ ಮಂಡ್ಯದ ರೈತರು ಅಕ್ಕಿ, ಬೆಲ್ಲ, ತೆಂಗಿನಕಾಯಿ ಕಳುಹಿಸಿದ್ದರು.
ಭಕ್ತರ ಪರದಾಟ: ಭಾಗಮಂಡಲದಿಂದ ತಲಕಾವೇರಿಗೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದ ಭಕ್ತರು ಪರದಾಟ ನಡೆಸಬೇಕಾದ ಸ್ಥಿತಿಯಿತ್ತು.
ಭಾಗಮಂಡಲದ ಭಗಂಡೇಶ್ವರನ ದೇಗುಲದಲ್ಲೂ ತುಲಾ ಸಂಕ್ರಮಣ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಕಾವೇರಿ, ಸುಜ್ಯೋತಿ ಹಾಗೂ ಕನ್ನಿಕೆ ನದಿಯ ಸಂಗಮದ ಸ್ಥಳದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನೂರಾರು ಮಂದಿ ಪಿಂಡ ಪ್ರದಾನ ಮಾಡಿದರು.
ಬ್ರಹ್ಮಗಿರಿಗೆ ಪ್ರವೇಶಾವಕಾಶ ಕಲ್ಪಿಸಿದ್ದ ಕಾರಣ ಪ್ರವಾಸಿಗರು ಬೆಟ್ಟವನ್ನೇರಿ ಸಂಭ್ರಮಿಸಿದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಪಾಲ್ಗೊಂಡಿದ್ದರು