ಮೈಸೂರು: ‘ಶಿಕ್ಷಣ ವ್ಯವಸ್ಥೆಯಲ್ಲಿ ಬಡವ– ಶ್ರೀಮಂತರೆಂಬ ಭೇದವಿಲ್ಲದೆ, ನರ್ಸರಿಯಿಂದ 4ನೇ ತರಗತಿವರೆಗೆ ಕನ್ನಡ ಪ್ರಥಮ ಭಾಷೆಯಾಗಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಸಮಾನ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಸ್ವರಾಜ್ ಇಂಡಿಯಾ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ’ ಎಂದು ಪಕ್ಷದ ಜಿಲ್ಲಾ ಸಂಚಾಲಕ ಶಬೀರ್ ಮುಸ್ತಾಫ್ ತಿಳಿಸಿದರು.
ನಗರದಲ್ಲಿ ಶನಿವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ನಂತರ ಅವರು ಮಾತನಾಡಿದರು.
ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಗುಣಮಟ್ಟದ ವೈದ್ಯಕೀಯ ಸೇವಾ ಸೌಲಭ್ಯ ಸಾಮಾನ್ಯರಿಗೂ ದಕ್ಕಬೇಕು. ಪರಿಸರ ಕಾಳಜಿ, ಬರ ಮುಕ್ತ ಕರ್ನಾಟಕದ ಚಿಂತನೆ, ಕೃಷಿ ಮತ್ತು ಅರಣ್ಯಾಭಿವೃದ್ಧಿ ಆಗಬೇಕು. ದೇಶದ ಜ್ವಲಂತ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಎಂಬ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ ಎಂದು ಹೇಳಿದರು.
₹ 10 ಸಾವಿರ ದೇಣಿಗೆ: ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರೂ ಆಗಿರುವ ಸಾಹಿತಿ ದೇವನೂರ ಮಹಾದೇವ ಅವರು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಬಾನು ಮೋಹನ್ ಅವರಿಗೆ ₹ 10,000 ದೇಣಿಗೆ ನೀಡಿದರು.