ಶಿರಸಿ (ಉ.ಕ): ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ವೈದೇಹಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದೇಹಿ, ‘ತಮಾಷೆ ನಂದಿಸಿಕೊಂಡ, ಮಾತು ಕಳೆದುಕೊಂಡ, ಮಾತು ಮಾಹಿತಿ ಆದ ಸಮಾಜದಲ್ಲಿ ನಾವಿದ್ದೇವೆ. ಇಂತಹ ಸಮಾಜವನ್ನು ಲವಲವಿಕೆಗೆ ತರುವ ಸವಾಲು ಸಾಹಿತಿಗಳ ಮುಂದಿದೆ’ ಎಂದರು.
‘ಮನಸ್ಸಿಗೆ ನೋವುಂಟು ಮಾಡುವ, ಅಮಾನವೀಯ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಈ ದ್ವಂದ್ವಗಳನ್ನು ಕತೆಗಾರರು ಕತೆಯಲ್ಲಿ ನಿರೂಪಿಸಬಹುದು. ಆದರೆ ಇವನ್ನು ಹಾಸ್ಯದ ಮೂಲಕ ಸಮಾಜಕ್ಕೆ ತಲುಪಿಸುವುದು ಹಾಸ್ಯ ಬರಹಗಾರರಿಗೆ ಸವಾಲಾಗಿದೆ’ ಎಂದರು.
ಭುವನೇಶ್ವರಿ ಹೆಗಡೆ ಮಾತನಾಡಿ ‘ಅನುಭವವನ್ನು ಆಶ್ರಯಿಸಿಕೊಂಡವರು ಹಾಸ್ಯ ಸಾಹಿತಿಗಳು. ಆದರೆ ಎಂದಿಗೂ ಒಬ್ಬ ಬಡವ, ಒಬ್ಬ ಅಂಗವಿಕಲನನ್ನು ಕಂಡಾಗ ಹಾಸ್ಯ ಸೃಷ್ಟಿಯಾಗಲಿಲ್ಲ. ‘ಕುಂಠಿತ’ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಹಾಸ್ಯ ಮೂಡಿ ಬಂದಿದೆ’ ಎಂದರು.
ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.