ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಹೆಬ್ಬಾಳ ಬಳಿಯ ಬೆಣ್ಣೆತೊರಾ ನೀರಾವರಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಬೆಣ್ಣೆತೊರಾ ಜಲಾಶಯದಿಂದ 2,330 ಕ್ಯೂಸೆಕ್ ನೀರನ್ನು ಮಂಗಳವಾರ ನದಿಗೆ ಹರಿಬಿಡಲಾಗಿದೆ.
ಜಲಾಶಯದ ಸದ್ಯದ ಒಳಹರಿವು 6,016 ಕ್ಯೂಸೆಕ್ ಇದ್ದು, ಹೊರಹರಿವು 2,330 ಕ್ಯೂಸೆಕ್ ಇದೆ. ನೀರು ಬಿಡುಗಡೆ ಮಾಡಿರುವುದರಿಂದ ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ಸೇರಿ ಹಲವು ಗ್ರಾಮಗಳು ಸಂಪರ್ಕ ಕಡೆದುಕೊಳ್ಳುವ ಭೀತಿ ಎದುರಿಸುತ್ತಿವೆ.
‘ನದಿಯ ಎರಡೂ ದಂಡೆಗಳಲ್ಲಿರುವ ಜನರು ಮತ್ತು ರೈತರು ತಮ್ಮ ಆಸ್ತಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಸುರಕ್ಷಿತ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು’ ಎಂದು ಬೆಣ್ಣೆತೊರಾ ಅಣೆಕಟ್ಟು ಯೋಜನೆಯ ಹೆಬ್ಬಾಳ ವಿಭಾಗ-4ರ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದ್ದಾರೆ.