ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಮೀಸಲು ಪುನರಾವರ್ತನೆಯಾಗಿರುವ ಸ್ಥಳಗಳಲ್ಲಿ ಮೀಸಲಾತಿ ಪಟ್ಟಿಯನ್ನು ಎರಡು ತಿಂಗಳಿನಲ್ಲಿ ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಮೀಸಲು ನಿಗದಿಯಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಬಹುತೇಕ ಸ್ಥಳಗಳಲ್ಲಿ 1964ರ ಪೌರಾಡಳಿತ ಕಾಯ್ದೆ ಉಲ್ಲಂಘನೆ ಆಗಿದೆ. ಸರ್ಕಾರ ಮೀಸಲು ನಿಗದಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು, ಇದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯರ್ಮೂರ್ತಿ ಎಚ್.ಜಿ.ರಮೇಶ್ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿದೆ.
ಸರದಿಯಂತೆ ಮೀಸಲು ನಿಗದಿ ಮಾಡುವಲ್ಲಿ ಲೋಪ ಆಗಿರುವ ಕಡೆ ಎರಡು ತಿಂಗಳಲ್ಲಿ ಸರಿಪಡಿಸಬೇಕು. ಸರ್ಕಾರ ಬಯಸಿದರೆ ಇಡೀ ಮೀಸಲಾತಿ ಪಟ್ಟಿಯನ್ನೇ ಹೊಸದಾಗಿ ಸಿದ್ಧಪಡಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.
ನಿಯಮ ಉಲ್ಲಂಘನೆ: 1964ರ ಪೌರಾಡಳಿತ ಕಾಯ್ದೆ ಪ್ರಕಾರ ಮೀಸಲು ನಿಗದಿಯಲ್ಲಿ ಪುನರಾವರ್ತನೆಗೆ ಅವಕಾಶ ಇಲ್ಲ. ಸರದಿ ಪೂರ್ಣಗೊಂಡ ನಂತರವಷ್ಟೆ ಮೀಸಲು ಪುನರಾವರ್ತನೆಯಾಗಬೇಕು. ಆದರೆ ರಾಜ್ಯ ಸರ್ಕಾರ ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ಬಹುತೇಕ ಕಡೆಗಳಲ್ಲಿ ಮೀಸಲು ಪುನರಾವರ್ತನೆಯಾಗಿದೆ. ಇದು ಸರಿಯಾದ ಕ್ರಮವಲ್ಲ. ತಾನು ರೂಪಿಸಿರುವ ಮೀಸಲಾತಿ ಪಟ್ಟಿ ಅಂತಿಮ ಎಂದು ಸರ್ಕಾರ ಭಾವಿಸಿದಂತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.