ಮಂಡ್ಯ: ‘ಜೀವನ ಸುಂದರವಾದುದು ಮತ್ತು ಅಮೂಲ್ಯವಾದುದು. ಆತ್ಮಹತ್ಯೆಯೇ ಸಮಸ್ಯೆಗಳಿಗೆ ಪರಿಹಾರವಲ್ಲ. ಈಸಬೇಕು– ಇದ್ದು ಜಯಿಸಬೇಕು’
–ಹೀಗೊಂದು ಮನವಿ ಪತ್ರ ಹಿಡಿದುಕೊಂಡು ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿ ಗ್ರಾಮ ಗ್ರಾಮಗಳಿಗೆ ತೆರಳಿ ಜಾಗೃತಿ ಸಭೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಪ್ಪತ್ತು ದಿನದ ಅವಧಿಯಲ್ಲಿ ಎಂಟು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈ ಅಭಿಯಾನ ಆರಂಭಿಸಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳದಂತೆ ಮಾಡುವ ಮನವಿಯ ಜತೆಗೆ, ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ ಉಲ್ಲಂಘಿಸಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡುವ ಕರಪತ್ರಗಳನ್ನೂ ವಿತರಣೆ ಮಾಡಲಾಗುತ್ತಿದೆ. ರೈತರಲ್ಲಿ ಮಿತಿ ಮೀರಿದ ಬಡ್ಡಿ ವಸೂಲಾತಿ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರಗಳಲ್ಲಿ ಅಧಿನಿಯಮದ ಬಗ್ಗೆ ವಿವರವಾಗಿ ಮುದ್ರಿಸಲಾಗಿದೆ. ಸಾಲ ನೀಡಿದ ವ್ಯಕ್ತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ರುಜುವಾತಾದರೆ ಅವರ ವಿರುದ್ಧ ‘ಆತ್ಮಹತ್ಯೆಗೆ ಪ್ರೇರೇ ಪಿಸಿದ್ದಾರೆ’ ಎಂದು ಪರಿಗಣಿಸಿ ದೂರು ದಾಖಲಿಸಲು ಇಲಾಖೆ ಮುಂದಾಗಿದೆ.
ಮಿತಿಮೀರಿದ ಬಡ್ಡಿ ಕಿರುಕುಳವಿದ್ದರೆ ಕೂಡಲೇ ದೂರು ಸಲ್ಲಿಸಬಹುದು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವಂತೆ ದೂರವಾಣಿ ಸಂಖ್ಯೆ ನೀಡಲಾಗಿದೆ.