ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ): ಸನಾತನ ಧರ್ಮ ಪ್ರಚಾರಕ್ಕೆ 12ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಮೊದಲನೆಯದಾದ ಶೃಂಗೇರಿ ಶಾರದಾ ಪೀಠದ 37ನೇ ಪೀಠಾಧಿಪತಿಯಾಗಿ ಆಯ್ಕೆಯಾಗಿರುವ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ ಅವರ ಸನ್ಯಾಸ ಸ್ವೀಕಾರ ಇದೇ 22ರಿಂದ ಶೃಂಗೇರಿ ಶಾರದಾ ಮಠದಲ್ಲಿ ಆರಂಭವಾಗಲಿದೆ.
ಎರಡು ದಿನಗಳ ಕಾಲ ನಡೆಯುವ ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಶೃಂಗೇರಿ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರು, ತಮ್ಮ ಉತ್ತರಾಧಿಕಾರಿಯನ್ನು ಶಿಷ್ಯರಾಗಿ ಸ್ವೀಕರಿಸಿ, ಕಾಷಾಯವಸ್ತ್ರ, ದಂಡ, ಕಮಂಡಲ ಅನುಗ್ರಹಿಸಲಿದ್ದಾರೆ.
ಬ್ರಹ್ಮಚಾರಿ ವೆಂಕಟೇಶ್ವರ ಪ್ರಸಾದ ಶರ್ಮ ಅವರು ಗುರುವಾರ ಬೆಳಿಗ್ಗೆ 8 ಗಂಟೆಗೆ ಭಾರತೀ ತೀರ್ಥರಿಗೆ ವಂದನೆ ಸಲ್ಲಿಸುವ ಮುಖೇನ ಸನ್ಯಾಸ ಸ್ವೀಕಾರ ಸಮಾರಂಭ ವಿಧ್ಯುಕ್ತವಾಗಿ ಆರಂಭವಾಗಲಿದೆ. ನೂತನ ಪೀಠಾಧಿಪತಿಗಳು ಬೆಳಿಗ್ಗೆ 8.30ಕ್ಕೆ ಶಾರದಾ ದೇವಾಲಯದ ಶಕ್ತಿಗಣಪತಿ ಸನ್ನಿಧಿಯಲ್ಲಿ ನಡೆಯುವ ಅಷ್ಟದ್ರವ್ಯ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸುವರು. ಮಠದ ಎಲ್ಲ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದು, ನರಸಿಂಹವನ ಪ್ರವೇಶಿಸಲಿದ್ದಾರೆ. ಅಲ್ಲಿರುವ ಹಿಂದಿನ ಗುರುಗಳ ಸಮಾಧಿ ಮಂದಿರದಲ್ಲಿ 10 ಗಂಟೆಯಿಂದ ಸನ್ಯಾಸತ್ವದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
೨೩ರಂದು ಧಾರ್ಮಿಕ ವಿಧಿಗಳ ನಂತರ ಶರ್ಮಾ ಅವರು ಶ್ವೇತ ವಸ್ತ್ರ ಪರಿತ್ಯಾಗ ನಡೆಸಿ, ಭಾರತೀ ತೀರ್ಥರಿಂದ ಕಾಷಾಯವಸ್ತ್ರ, ದಂಡ, ಕಮಂಡಲ ಪಡೆಯಲಿದ್ದಾರೆ. ಪೀಠದ ಹಿರಿಯ ಗುರುಗಳು, ಬೆಳಿಗ್ಗೆ ೧೦.೩ಕ್ಕೆ ಶ್ರೀ ಶಾರದಾಂಬ ದೇವಾಲಯದ ವ್ಯಾಖ್ಯಾನ ಸಿಂಹಾಸನದಲ್ಲಿ ತಮ್ಮ ಶಿಷ್ಯ ಸ್ವಾಮೀಜಿಯನ್ನು ಕುಳ್ಳಿರಿಸಿ, ಅವರ ಶಿರಸ್ಸಿನಲ್ಲಿ ಸಾಲಿಗ್ರಾಮ ಇಟ್ಟು, ಯೋಗಪಟ್ಟ ನೀಡಲಿದ್ದಾರೆ.
ಅಂದು ಸಂಜೆ ೫ ಗಂಟೆಗೆ ಗುರುವಂದನಾ ಸಭೆ, ಭಾರತೀ ತೀರ್ಥರ ಅನುಗ್ರಹ ಭಾಷಣ, ರಾತ್ರಿ ೮.೩೦ಕ್ಕೆ ಹಿರಿಯ ಶ್ರೀಗಳನ್ನು ಸ್ವರ್ಣ ಪಲ್ಲಕ್ಕಿ ಮತ್ತು ನೂತನ ಪೀಠಾಧಿಪತಿಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಶೃಂಗೇರಿಯ ರಾಜಬೀದಿಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ.
ಮಠದ ಪರಂಪರೆಯಲ್ಲೇ ಅತಿ ಮಹತ್ವದ್ದಾದ ಶಿಷ್ಯ ಸ್ವೀಕಾರ ಸಮಾರಂಭ ನಾಲ್ಕು ದಶಕಗಳ ನಂತರ ನಡೆಯುತ್ತಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಮಠಾಧೀಶರು, ಗಣ್ಯಾತಿಗಣ್ಯರು, ದೇಶ, ವಿದೇಶಗಳ ಭಕ್ತರು ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.