ತುಮಕೂರು: ಸಿದ್ಧಗಂಗಾ ಮಠದ ಆವರಣದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮಠಾಧೀಶ, ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರು ಶನಿವಾರ ಬೆಳಿಗ್ಗೆ 10ರ ಸುಮಾರಿಗೆ ಮತ ಚಲಾಯಿಸಿದರು.
ಕಾರಿನಲ್ಲಿ ಬಂದ ಅವರು ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮತ್ತು ಸಹಾಯಕರ ನೆರವಿನೊಂದಿಗೆ ಮತಗಟ್ಟೆ ಪ್ರವೇಶಿಸಿದರು. ಈ ವೇಳೆ ಮತದಾನಕ್ಕೆ ಸಾಲುಗಟ್ಟಿದ್ದ ಜನರು ಸ್ವಾಮೀಜಿ ಅವರಿಗೆ ದಾರಿ ಮಾಡಿಕೊಟ್ಟರು. ಚುನಾವಣಾಧಿಕಾರಿ ಬಳಿ ದಾಖಲೆ ಪುಸ್ತಕಕ್ಕೆ ರುಜು ಹಾಕಿ ಮತದಾನ ಮಾಡಿದರು.
ಕಳೆದ ಏಪ್ರಿಲ್ 1ರಂದು 111ನೇ ವರ್ಷಕ್ಕೆ ಕಾಲಿರಿಸಿದ ಸ್ವಾಮೀಜಿಯವರು ಸ್ವಾತಂತ್ರ್ಯಾನಂತರ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಮಾಡಿದ್ದಾರೆ. ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಸಿದ್ಧಾರ್ಥ ನಗರದ ಮತಗಟ್ಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪತ್ನಿ ಕನ್ನಿಕಾ ಮತ ಚಲಾಯಿಸಿದರು. ಅಲ್ಲಿಂದ ಹೊರ ಬಂದ ದಂಪತಿ ಗೆಲುವಿನ ನಗೆ ಬೀರಿದರು.