ಕುಶಾಲನಗರ: ಜನವರಿ 6ರಿಂದ 8ರವರೆಗೆ ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 3.75 ಕೋಟಿ ವೆಚ್ಚವಾಗಲಿದ್ದು ಸದ್ಯ ರೂ 2.90 ಕೋಟಿಯಷ್ಟೇ ಸಂಗ್ರಹವಾಗಿದೆ. ಕೊರತೆಯಾಗಿರುವ ರೂ 1.85 ಕೋಟಿ ಹಣವನ್ನು ವಸ್ತುಗಳ ರೂಪದಲ್ಲಿ ಸಂಗ್ರಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಿಸರ್ಗಧಾಮದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
14 ದಿನಗಳಷ್ಟೇ ಬಾಕಿ ಇರುವ ಸಮ್ಮೇಳನಕ್ಕೆ ಜಾಹೀರಾತು ವಿಭಾಗದಿಂದ ರೂ 13 ಲಕ್ಷ, ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳದಿಂದ ರೂ 25 ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು ರೂ 2.90 ಕೋಟಿ ಹಣ ಸಂಗ್ರಹವಾಗುವ ಖಚಿತತೆ ಇದೆ ಎಂದು ಸಮ್ಮೇಳನದ ಕಾರ್ಯದರ್ಶಿಯೂ ಆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಸಭೆಗೆ ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆಗಾಗಿ ಆಹಾರ ಸಾಮಗ್ರಿ ಕೊಳ್ಳಲು ರೂ 45ರಿಂದ 50 ಲಕ್ಷ ಬೇಕಾಗಿದ್ದು ಇದಕ್ಕೆ ಸಂಬಂಧಿಸಿ ಮುಜರಾಯಿ ಇಲಾಖೆಯ ರಾಜ್ಯದ ವಿವಿಧ ದೇವಾಲಯಗಳಿಂದ ಆಹಾರ ಸಾಮಗ್ರಿ ನೀಡಲು ಸರ್ಕಾರ ಆದೇಶಿಸುವಂತೆ ಕೇಳಿಕೊಳ್ಳಲಾಗುವುದು, ಅಲ್ಲದೆ, ತಮ್ಮ ವಿಧಾನಸಭಾ ಕ್ಷೇತ್ರದಿಂದ ನೂರು ಕ್ವಿಂಟಲ್ ಅಕ್ಕಿ ಕೊಡಿಸುವುದಾಗಿ ಎಂದು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಪ್ರತಿ ವರ್ಷದ ಸಮ್ಮೇಳನಕ್ಕೆ ಹಾಸನ ಹಾಲೂ ಒಕ್ಕೂಟದಿಂದ ಹಾಲು, ಮೊಸರು ಮತ್ತು ತುಪ್ಪಗಳನ್ನು ನೀಡಲಾಗುತ್ತಿತ್ತು. ಆದರೆ, ಈ ಒಕ್ಕೂಟಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತ್ತಿಲ್ಲ ಎಂದು ಟಿ.ಪಿ. ರಮೇಶ್ ತಿಳಿಸಿದರು. ಹಾಲು ಒಕ್ಕೂಟದಿಂದ ಹಾಲು, ಮೊಸರು ದೊರೆತಲ್ಲಿ ರೂ 10 ಲಕ್ಷ ಹಣ ಉಳಿತಾಯವಾಗುವುದರಿಂದ ತಕ್ಷಣವೇ ಈ ಕುರಿತು ಸಂಬಂಧಿಸಿದವರಲ್ಲಿ ಮಾತನಾಡುವುದಾಗಿ ಸಚಿವ ಮಹದೇವಪ್ಪ ತಿಳಿಸಿದರು.
ಮೈಸೂರು ಕೊಡಗು ಕ್ಷೇತ್ರದ ಸಂಸದ ಎಚ್. ವಿಶ್ವನಾಥ್, ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಸನ್ನ, ವಿಧಾನ ಪರಿಷತ್ ಸದಸ್ಯ ಟಿ. ಜಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.