ಮಂಗಳೂರು: ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ಕಾನೂನು ಸಂಘರ್ಷ ಎದುರಿಸುತ್ತಿದ್ದ ಬಾಲಕನೊಬ್ಬನಿಗೆ ಬಾಲ ನ್ಯಾಯ ಮಂಡಳಿ ಬುಧವಾರ ಜಾಮೀನು ನೀಡಿದೆ. ಒಂಬತ್ತು ತಿಂಗಳ ಜೈಲುವಾಸದ ಬಳಿಕ ಬಾಲಕ ಬುಧವಾರ ಮನೆಗೆ ಮರಳಿದ್ದಾನೆ.
ಹೋಂಸ್ಟೇ ದಾಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 37 ಮಂದಿಯ ಪೈಕಿ ಈ ಬಾಲಕನೂ ಸೇರಿದ್ದ. ಇತರ ಆರೋಪಿಗಳೊಂದಿಗೆ ಮಂಗಳೂರು ಜೈಲಿನಲ್ಲಿದ್ದ ಆತನನ್ನು ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿಕೊಡುವಂತೆ ನ್ಯಾಯಾಲಯ ಸೂಚಿಸಿತ್ತು.
ಆರೋಪಿಯು ಬಾಲಕ ಎಂಬುದು ಸಾಬೀತಾದ ಬಳಿಕ ಗ್ರಾಮಾಂತರ ಠಾಣೆಯ ಪೊಲೀಸರು ಪರಿಷ್ಕೃತ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬಾಲ ನ್ಯಾಯ ಮಂಡಳಿ ಬಾಲಕನಿಗೆ ಜಾಮೀನು ನೀಡಿದೆ.
`ಬಾಲಕ ಒಂಬತ್ತು ತಿಂಗಳು ಜೈಲುವಾಸ ಅನುಭವಿಸಬೇಕಾಗಿ ಬಂದಿದ್ದು ದುರದೃಷ್ಟಕರ. ಪೊಲೀಸರು ಆರಂಭದಲ್ಲೇ ವಯಸ್ಸ ನ್ನು ಸರಿಯಾಗಿ ಪರಿಶೀಲಿಸಿ ಆರೋಪಪಟ್ಟಿ ಸಲ್ಲಿಸುತ್ತಿದ್ದರೆ ಬಾಲಕ ಜೈಲುವಾಸ ಅನುಭವಿಸಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ' ಎಂದು ಬಾಲಕನ ವಕೀಲರು ದೂರಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರಿಗೆ ಜಾಮೀನು ಸಿಕ್ಕಿದಂತಾಗಿದೆ. ಇನ್ನೊಬ್ಬ ಆರೋಪಿ, ಪತ್ರಕರ್ತ ನವೀನ್ ಸೂರಿಂಜೆ ಅವರು ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.