ವಾಷಿಂಗ್ಟನ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿ ವಿಶ್ವದಾದ್ಯಂತ ಇರುವ ಎಎಪಿ ಸದಸ್ಯರು ಮತ್ತು ಬೆಂಬಲಿಗರು ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ಮಾಡಿದರು.
ಅಮೆರಿಕ, ಕೆನಡಾ, ಬ್ರಿಟನ್, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿರುವ ಎಎಪಿ ಕಾರ್ಯಕರ್ತರು ಭಾರತೀಯ ರಾಯಭಾರ ಕಚೇರಿ ಎದುರು ಮತ್ತು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿ, ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
‘ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡುತ್ತಿರುವ ಲಕ್ಷಾಂತರ ಭಾರತೀಯರ ಭರವಸೆಯ ಪ್ರತೀಕ ಅರವಿಂದ್ ಕೇಜ್ರಿವಾಲ್. ಅವರ ಬಂಧನವು ಪ್ರಜಾಪ್ರಭುತ್ವದ ಮೇಲಿನ ದಾಳಿಗೆ ಉದಾಹರಣೆ’ ಎಂದು ಲಾಸ್ಏಂಜಲೀಸ್ನಲ್ಲಿರುವ ಎಎಪಿ ಸದಸ್ಯ ಜಸ್ವಂತ್ ರೆಡ್ಡಿ ಆರೋಪಿಸಿದರು.
ನ್ಯೂಯಾರ್ಕ್, ಬಾಸ್ಟನ್, ಸ್ಯಾನ್ಫ್ರಾನ್ಸಿಸ್ಕೊ, ಡಲ್ಲಾಸ್, ಲಾಸ್ಏಂಜಲೀಸ್, ಟೊರಾಂಟೊ, ವ್ಯಾಂಕೋವರ್, ಲಂಡನ್, ಬರ್ಲಿನ್, ಓಸ್ಲೊ ಮತ್ತು ಮೆಲ್ಬರ್ನ್ ಮೊದಲಾದ ಕಡೆ ಎಎಪಿ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು.