ಲಂಡನ್: ಲಂಡನ್ನಲ್ಲಿನ ಭಾರತದ ರಾಯಭಾರ ಕಚೇರಿ ಮೇಲೆ ಈ ವರ್ಷದ ಮಾರ್ಚ್ನಲ್ಲಿ ನಡೆದ ದಾಳಿಗೆ ಸಂಬಂಧಿಸಿ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದಾರೆ.
ಮಾರ್ಚ್ 19ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಂಕಿತ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿತ್ತು. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಹೆಚ್ಚಿನ ವಿಚಾರಣೆ ಬಾಕಿ ಇದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುತಿಸಿರುವ ಹತ್ತಕ್ಕೂ ಹೆಚ್ಚು ವ್ಯಕ್ತಿಗಳಲ್ಲಿ ಈ ಶಂಕಿತ ವ್ಯಕ್ತಿಯೂ ಸೇರಿದ್ದಾನೆ.
ಖಾಲಿಸ್ತಾನ ಉಗ್ರರು ರಾಯಭಾರ ಕಚೇರಿ ಕಟ್ಟಡದ ಮೇಲೇರಿ, ಭಾರತದ ರಾಷ್ಟ್ರಧ್ವಜ ಉರುಳಿಸಲು ಯತ್ನಿಸಿದ್ದರು. ಕಟ್ಟಡದ ಮೇಲೆ ಕಲ್ಲುಗಳನ್ನು ತೂರಿದ್ದರಿಂದ ಕಿಟಕಿಗಳು ಒಡೆದು, ಒಬ್ಬ ಅಧಿಕಾರಿ ಗಾಯಗೊಂಡಿದ್ದರು.