ನವದೆಹಲಿ: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ದೇವಾಲಯಗಳ ಮೇಲಿನ ದಾಳಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಜತೆಗಿನ ಮಾತುಕತೆ ವೇಳೆ ಪ್ರಸ್ತಾಪಿಸಿದ್ದಾರೆ.
ಉಭಯ ದೇಶಗಳ ನಡುವಿನ ಎಲ್ಲ ಒಪ್ಪಂದಗಳನ್ನು ವಿಸ್ತರಿಸುವ ಕುರಿತಂತೆ ನಡೆದ ವಿಸ್ತೃತ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಲಾಗಿದೆ.
ಕಳೆದ ಕೆಲ ವಾರಗಳಿಂದ ಆಸ್ಟ್ರೇಲಿಯಾದಲ್ಲಿ ದೇಗುಲಗಳ ಮೇಲೆ ನಡೆಯುತ್ತಿರುವ ದಾಳಿಗಳು ವಿಷಾದನೀಯ. ಅಂತಹ ಸುದ್ದಿಗಳು ಭಾರತೀಯರನ್ನು ಆತಂಕಕ್ಕೆ ದೂಡುತ್ತವೆ ಎಂದು ಮೋದಿ ತಿಳಿಸಿದ್ದಾರೆ.
‘ಭಾರತೀಯರ ಭಾವನೆಗಳು ಮತ್ತು ಕಳವಳವನ್ನು ಆಸ್ಟ್ರೇಲಿಯಾ ಪ್ರಧಾನಿ ಗಮನಕ್ಕೆ ತಂದಿರುವೆ. ವಿಶೇಷ ಆದ್ಯತೆ ಮೇರೆಗೆ ಭಾರತೀಯ ಸಮುದಾಯಕ್ಕೆ ರಕ್ಷಣೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಸಮ್ಮಖದಲ್ಲೇ ಮೋದಿ ಹೇಳಿದರು.
‘ಈ ವಿಷಯ ಕುರಿತಂತೆ ನಮ್ಮ ತಂಡವು ನಿರಂತರವಾಗಿ ಸಂಪರ್ಕದಲ್ಲಿರಲಿದ್ದು, ಗರಿಷ್ಠ ಸಹಕಾರ ನೀಡುತ್ತೇವೆ’ ಎಂದು ಮೋದಿ ತಿಳಿಸಿದರು.
ಇದೇವೇಳೆ, ನೌಕಾ ಭದ್ರತೆ ಕುರಿತಂತೆಯೂ ಆಸ್ಟ್ರೇಲಿಯಾ ಪ್ರಧಾನಿ ಅವರೊಂದಿಗೆ ಚರ್ಚೆ ನಡೆದಿದೆ. ವಿಶ್ವಾಸಾರ್ಹ ಮತ್ತು ಬಲಿಷ್ಠ ಜಾಗತಿಕ ಸರಬರಾಜು ಸರಪಳಿ ನಿರ್ಮಾಣಕ್ಕೆ ಪರಸ್ಪರ ಸಹಕಾರ ಕುರಿತಂತೆಯೂ ಚರ್ಚಿಸಿದೆವು ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.