ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಸೋಲ್‌ ಶಾಂತಿ ಪ್ರಶಸ್ತಿ ಪ್ರದಾನ

ಭಯೋತ್ಪಾದನೆ ವಿರುದ್ಧ ಸಮರ ಸಾರಲು ಜಾಗತಿಕ ಸಮುದಾಯಕ್ಕೆ ಕರೆ
Last Updated 22 ಫೆಬ್ರುವರಿ 2019, 20:08 IST
ಅಕ್ಷರ ಗಾತ್ರ

ಸೋಲ್‌: 2018ನೇ ಸಾಲಿನ ಪ್ರತಿಷ್ಠಿತ ಸೋಲ್‌ ಶಾಂತಿ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು.

ಅಂತರರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕತೆಗೆ ಉತ್ತೇಜನ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಶಸ್ತಿ ಮೊತ್ತ 2 ಲಕ್ಷ ಡಾಲರ್‌ (₹1.42ಕೋಟಿ) ಅನ್ನು ಗಂಗಾ ನದಿ ಸಂರಕ್ಷಣೆ ಮತ್ತು ಪುನಶ್ಚೇತನಕ್ಕಾಗಿ ರೂಪಿಸಿರುವ ‘ನಮಾಮಿ ಗಂಗೆ’ ಯೋಜನೆಗೆ ದೇಣಿಗೆ ನೀಡುವುದಾಗಿ ಮೋದಿ ತಿಳಿಸಿದರು.

ವಿಶ್ವಸಂಸ್ಥೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಜನರಲ್‌ ಕೋಫಿ ಅನ್ನಾನ್‌ ಸೇರಿದಂತೆ ಇದುವರೆಗೆ 13 ಮಂದಿ ಈ ಪ್ರಶಸ್ತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಈ ಪ್ರಶಸ್ತಿ ವೈಯಕ್ತಿಕವಾಗಿ ನನಗೆ ಸಂದಿಲ್ಲ. ಭಾರತದ ಜನತೆಗೆ ಸಂದಿದೆ. ಭಾರತದ ಜನರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತೇನೆ’ ಎಂದು ಹೇಳಿದರು.

‘ಶಾಂತಿ ಮತ್ತು ಭದ್ರತೆಗೆ ಬೆದರಿಕೆವೊಡ್ಡಿರುವ ಭಯೋತ್ಪಾದನೆ ವಿರುದ್ಧ ಜಗತ್ತು ಒಗ್ಗಟ್ಟಿನಿಂದ ಕ್ರಮಕೈಗೊಳ್ಳಬೇಕಾಗಿದೆ’ ಎಂದು ಪ್ರತಿಪಾದಿಸಿದರು.

‘ದಕ್ಷಿಣ ಕೊರಿಯಾದ ರೀತಿಯಲ್ಲಿ ಭಾರತವು ಗಡಿಯಾಚೆಗಿನ ಭಯೋತ್ಪಾದನೆ ಸಮಸ್ಯೆಯನ್ನು 40 ವರ್ಷಗಳಿಂದ ಎದುರಿಸುತ್ತಿದೆ. ಶಾಂತಿ ಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಭಯೋತ್ಪಾದನೆಯಿಂದ ಹಿನ್ನಡೆಯಾಗಿದೆ’ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಟೀಕಿಸಿದರು.

‘ಉಗ್ರರ ಜಾಲ ನಿರ್ಮೂಲನೆಗೆ ಪಣತೊಡಿ’
ಉಗ್ರರ ಜಾಲತಾಣಗಳು ಮತ್ತು ಹಣಕಾಸು ಪೂರೈಕೆಯ ಮಾರ್ಗಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಜಾಗತಿಕ ಸಮುದಾಯ ಮುಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೆ–ಇನ್‌ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದ ಗೃಹ ಸಚಿವಾಲಯ ಮತ್ತು ದಕ್ಷಿಣ ಕೊರಿಯಾದ ರಾಷ್ಟ್ರೀಯ ಪೊಲೀಸ್‌ ಸಂಸ್ಥೆ ನಡುವೆ ಮಾಡಿಕೊಳ್ಳಲಾದ ಒಪ್ಪಂದದಿಂದ ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸಲು ಸಹಕಾರಿಯಾಗಲಿದೆ’ ಎಂದರು.

*
ಮಾನವೀಯತೆಯಲ್ಲಿ ನಂಬಿಕೆ ಇರುವವರೆಲ್ಲರೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಾಗಿದೆ.
-ನರೇಂದ್ರ ಮೋದಿ,ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT