ರೊಮೇನಿಯಾ: ಬುಕಾರೆಸ್ಟ್ನಲ್ಲಿ ನಡೆದ ಅಂತರರಾಷ್ಟ್ರೀಯ ಜಾಹೀರಾತು ಸಂಘಟನೆಯ (ಐಎಎ) ಸಭೆಯಲ್ಲಿ ಆರ್.ಕೆ ಹಂಸ ಗ್ರೂಪ್ ಮುಖ್ಯಸ್ಥ ಶ್ರೀನಿವಾಸನ್ ಸ್ವಾಮಿ ಅವರು ಸಂಘಟನೆಯ ಜಾಗತಿಕ ಅಧ್ಯಕ್ಷರಾಗಿ ಗುರುವಾರ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿ ಎರಡು ವರ್ಷ.
ಈ ಹುದ್ದೆಗೆ ಏರಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಇವರು ಪಾತ್ರರಾಗಿದ್ದಾರೆ. ಶ್ರೀನಿವಾಸನ್ ಅವರ ಆಯ್ಕೆಯು ಜಾಗತಿಕ ಜಾಹೀರಾತು ಉದ್ಯಮಕ್ಕೆ ಭಾರತದ ಕೊಡುಗೆಯನ್ನು ಬಿಂಬಿಸಿದೆ.
ಸಂಘಟನೆಯು 76 ದೇಶಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಶ್ರೀನಿವಾಸನ್ ನೇತೃತ್ವದಲ್ಲಿ ಮುಂದಿನ ವರ್ಷ ಕೊಚ್ಚಿನ್ನಲ್ಲಿ 44ನೇ ಐಎಎ ಚುನಾವಣೆ ನಡೆಯಲಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವು ಭಾರತದಲ್ಲಿ ಮೊದಲ ಬಾರಿ ನಡೆಯಲಿದೆ.
ಸಂಘಟನೆಯ ಏಳ್ಗೆಗೆ ತಮ್ಮ ಅನುಭವವನ್ನು ಬಳಸಿಕೊಳ್ಳುವುದಾಗಿ ಶ್ರೀನಿವಾಸನ್ ಹೇಳಿದ್ದಾರೆ. ಸಂಘಟನೆಯ ಭಾರತದ ಮುಖ್ಯಸ್ಥರಾಗಿ ಅವರು ಕಾರ್ಯ ನಿರ್ವಹಿಸಿದ್ದರು.