ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಭಾವಚಿತ್ರವಿರುವ ಬೃಹತ್ ಹೊದಿಕೆಯೊಂದನ್ನು ಇಲ್ಲಿನ ವಿವಿಧ ಕಾರಾಗೃಹಗಳಲ್ಲಿರುವ ಕೈದಿಗಳು ಸಿದ್ಧಪಡಿಸುತ್ತಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಮಂಡೇಲಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘64 ಬ್ಲಾಂಕೆಟ್ಸ್ ಪಾರ್ ಮಂಡೇಲಾ’ ಸಂಘಟನೆಯು ಈ ಯೋಜನೆಯನ್ನು ಹಮ್ಮಿಕೊಂಡಿದೆ.
‘4,500 ಚದರ ಮೀಟರ್ ಗಾತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಹೊದಿಕೆ ವಿಶ್ವದಲ್ಲೇ ಅತೀ ದೊಡ್ಡ ಹೊದಿಕೆಯಾಗಲಿದೆ. ಇದನ್ನು ಬಾಹ್ಯಾಕಾಶದಿಂದಲೂ ಕಾಣಬಹುದು’ ಎಂದು ಸಂಘಟನೆಯ ಕೆರೋಲಿನ್ ಸ್ಟೇನ್ ಹೇಳಿದ್ದಾರೆ
ಕೀನ್ಯಾ ಅಧ್ಯಕ್ಷರಾಗಿ ಉಹುರು ಕೆನ್ಯಾಟ್ಟಾ ಆಯ್ಕೆ
ನೈರೋಬಿ (ಎಎಫ್ಬಿ): ವಿವಾದಿತ ಚುನಾವಣೆಯಲ್ಲಿ ಶೇಕಡಾ 54.27 ಮತಗಳೊಂದಿಗೆ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ್ಟಾ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗವು ಫಲಿತಾಂಶ ಪ್ರಕಟಿಸಿದೆ. ಪ್ರತಿಸ್ಪರ್ಧಿ ರೈಲಾ ಒಡಿಂಗಾ ಶೇಕಡಾ 44.74 ಮತ ಪಡೆದಿದ್ದಾರೆ ಎಂದು ತಿಳಿಸಿದೆ.
’ಕಾನೂನಿನ ಅಗತ್ಯತೆ ಪೂರೈಸಿದ ನಂತರ, ಉಹುರು ಕೆನ್ಯಾಟ್ಟಾ ಅವರನ್ನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ’ ಎಂಬುದನ್ನು ಘೋಷಿಸುತ್ತೇನೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ವಾಫುಲಾ ಚೆಬುಕಟ್ಟಿ ತಿಳಿಸಿದರು.
ಸಸ್ಯ ಆಧಾರಿತ ಜೈಕಾ ಲಸಿಕೆಗಳ ಅಭಿವೃದ್ಧಿ
ವಾಷಿಂಗ್ಟನ್ (ಪಿಟಿಐ): ವಿಶ್ವದ ಮೊದಲ ಜೈಕಾ ಲಸಿಕೆಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದು ಸೊಳ್ಳೆ ಹರಡುವ ವೈರಸ್ಗಳ ವಿರುದ್ಧ ಇತರೆ ಲಸಿಕೆಗಳಿಗಿಂತ ಪರಿಣಾಮಕಾರಿ, ಅಗ್ಗ ಹಾಗೂ ಸುರಕ್ಷಿತ ಔಷಧಿಯಾಗಿದೆ.
ಪ್ರಸ್ತುತ ಜೈಕಾ ಎದುರಿಸಲು ಪರಿಣಾಮಕಾರಿ ಲಸಿಕೆಗಳು ಹಾಗೂ ಚಿಕಿತ್ಸೆಗಳು ಲಭ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ರವಾಹಕ್ಕೆ ಹನ್ನೊಂದು ಬಲಿ
ಟೆಹರಾನ್: ಈಶಾನ್ಯ ಇರಾನ್ನಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಹನ್ನೊಂದು ಮಂದಿ ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ರೆಡ್ ಕ್ರೆಸೆಂಟ್ ವರದಿ ಮಾಡಿದೆ.
ಈ ಅವಘಡದಲ್ಲಿ ಮೃತಪಟ್ಟ ಹನ್ನೊಂದು ಮಂದಿಯ ಪೈಕಿ ಎಂಟು ಮಂದಿ ಖೊರಾಸನ್ ರಝಾವಿ ಪ್ರಜೆಗಳು. ಇಬ್ಬರು ಗೊಲೆಸ್ತಾನಿಯರು, ಒಬ್ಬರು ಉತ್ತರ ಖೊರಸನ್ನ ಪ್ರಜೆ ಎಂದು ತಿಳಿದುಬಂದಿದೆ. ಶುಕ್ರವಾರ ಬಿರುಗಾಳಿ ಸಹಿತ ಮಳೆಯಿಂದಾಗಿ ಐದು ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದ್ದು, ಕೆಲವು ಗ್ರಾಮಗಳು ಶನಿವಾರ ಸಂಪರ್ಕ ಕಳೆದುಕೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.