ನನ್ನ ಈ ಅಂಕಣದ ಓದುಗರಿಗೆಲ್ಲ 2014ನೇ ವರ್ಷವು ಅದ್ಭುತವಾಗಿರಲಿ ಎಂದು ನಾನು ಶುಭ ಹಾರೈಸುವೆ. ಹೊಸ ವರ್ಷದ ಹೊಸ್ತಿಲಲ್ಲಿ ನಾವೆಲ್ಲ ನಿನ್ನೆಯಷ್ಟೇ ತೆರೆಮರೆಗೆ ಸರಿದಿರುವ ಹಳೆ ವರ್ಷದ ಕಹಿ ನೆನಪುಗಳನ್ನೆಲ್ಲ ಮರೆಯೋಣ. ಹಲವಾರು ಕಾರಣಗಳಿಗಾಗಿ ಅದೊಂದು ಕೆಟ್ಟ ಕನಸೆಂದು ಭಾವಿಸಿ ಮರೆತು ಮುಂದುವರೆಯೋಣ.
ಪ್ರತಿಯೊಬ್ಬರೂ ಭವಿಷ್ಯವನ್ನು ಹೊಸ ನಿರೀಕ್ಷೆಗಳೊಂದಿಗೆ ಎದುರು ನೋಡುವುದು ಸಹಜವಾದದ್ದು. ಇಂತಹ ಆಸೆ ಮತ್ತು ಆಕಾಂಕ್ಷೆಗಳೇ ಜನ ಸಾಮಾನ್ಯರನ್ನು ದಣಿವರಿಯದಂತೆ ದುಡಿಯಲು ಪ್ರೇರೆಪಿಸುತ್ತವೆ. ಉದ್ಯಮಿಗಳಂತೂ ಸಹಜವಾಗಿಯೇ ಷೇರು ಮಾರುಕಟ್ಟೆಯಂತೆ ಸದಾ ಆಶಾವಾದಿಯಾಗಿಯೇ ಇರುತ್ತಾರೆ. ಅವರೂ ಕೂಡ 2014ನೇ ವರ್ಷವನ್ನು ಅದೇ ಹೊಸ ಉತ್ಸಾಹದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.
ಮೊದಲಿಗೆ ನಾವು ಜಾಗತಿಕ ಆರ್ಥಿಕ ವಿದ್ಯಮಾನಗಳ ಮುನ್ನೋಟದತ್ತ ಗಮನ ಹರಿಸಿದ ನಂತರ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಆರ್ಥಿಕ ಚಟುವಟಿಕೆಗಳನ್ನು ವಿಮರ್ಶಿಸೋಣ,ಜಾಗತಿಕವಾಗಿ 2013ನೇ ವರ್ಷವನ್ನು ಆರ್ಥಿಕ ಚೇತರಿಕೆಯ ವರ್ಷ ಎಂದೇ ಪರಿಗಣಿಸಬೇಕಾಗುತ್ತದೆ. ಹಣಕಾಸು ಬಿಕ್ಕಟ್ಟಿನ ಗಾಯಗಳು ಒಂದೊಂದಾಗಿ ವಾಸಿಯಾದವು. ಅರ್ಥವ್ಯವಸ್ಥೆಯು ತನ್ನ ಮೊದಲಿನ ಖದರಿಗೆ ಮರಳಿ ಆರೋಗ್ಯಕರ ಮಟ್ಟದ ಆರ್ಥಿಕ ವೃದ್ಧಿ ಕಂಡಿತು. ಕೆಲ ಆರಂಭಿಕ ಲಕ್ಷಣಗಳೂ ನನ್ನಲ್ಲಿ ಹೊಸ ವರ್ಷದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗುವ ಬಗ್ಗೆ ನನ್ನ್ನಲ್ಲಿ ಆಶಾವಾದ ಮೂಡಿಸಿವೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್, ಪ್ರತಿ ತಿಂಗಳ ಬಾಂಡ್ ಖರೀದಿ ಪ್ರಮಾಣವನ್ನು 85 ಶತಕೋಟಿ ಡಾಲರ್ ಗಳಿಂದ 75 ಶತಕೋಟಿ ಡಾಲರ್ ಗಳಿಗೆ (ರೂ 5,10,000 ಕೋಟಿಗಳಿಂದ ರೂ 4,50,000 ಕೋಟಿಗಳಿಗೆ) ಕಡಿಮೆ ಮಾಡಿರುವುದಾಗಿ ಪ್ರಕಟಿಸಿದೆ. ಅಮೆರಿಕದ ಅರ್ಥ ವ್ಯವಸ್ಥೆಗೆ ಆತ್ಮವಿಶ್ವಾಸ ತುಂಬುವ ಕ್ರಮ ಇದಾಗಿದೆ. ಈ ಹಿಂದಿನಂತೆ ಹಣಕಾಸು ಮಾರುಕಟ್ಟೆಗೆ ಸರ್ಕಾರದ ಬೆಂಬಲದ ಅಗತ್ಯ ಇಲ್ಲ ಎಂದು ಕೇಂದ್ರೀಯ ಬ್ಯಾಂಕ್ ನಂಬಿದೆ.
ವಿಶ್ವದಲ್ಲಿಯೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿರುವ ಅಮೆರಿಕದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಮೂರನೆ ತ್ರೈಮಾಸಿಕದಲ್ಲಿ ಶೇ 4.1ರಷ್ಟು ವೃದ್ಧಿ ದಾಖಲಿಸಿದೆ. ಜಾಗತಿಕ ಅರ್ಥ ವ್ಯವಸ್ಥೆಯೂ ಇದೇ ಬಗೆಯ ಬೆಳವಣಿಗೆ ದಾಖಲಿಸುವ ಬಗ್ಗೆ ಇದೊಂದು ಅತ್ಯುತ್ತಮ ಸಂಕೇತವಾಗಿದೆ.
ಅಮೆರಿಕವೊಂದೆ ಅಲ್ಲದೇ, ಜಪಾನ್ ಮತ್ತು ಜರ್ಮನಿ ದೇಶಗಳ ಆರ್ಥಿಕತೆಗಳೂ ಇತ್ತೀಚೆಗೆ ಉತ್ತಮ ಸಾಧನೆ ತೋರಿಸಿವೆ. ಅಮೆರಿಕವು ಚೇತರಿಕೆಯ ಹಾದಿಗೆ ಮರಳುತ್ತಿರುವಂತೆ, ಪೂರ್ವ ಏಷ್ಯಾ ದೇಶಗಳೂ ಅದೇ ಹಾದಿಯಲ್ಲಿ ಸಾಗಿವೆ. ಐರೋಪ್ಯ ಒಕ್ಕೂಟದ ಸ್ಥಿತಿಗತಿ ಏನಾಗುತ್ತಿದೆ ಎನ್ನುವುದರತ್ತಲೇ ಈಗ ಎಲ್ಲರೂ ಗಮನ ಹರಿಸಿದ್ದಾರೆ. 2014ರಲ್ಲಿ ಜಾಗತಿಕ ಅರ್ಥ ವ್ಯವಸ್ಥೆಗೆ ಯೂರೋಪ್ ಒಕ್ಕೂಟವು ಮಹತ್ವದ ಕೊಡುಗೆ ನೀಡಬೇಕಾಗಿದೆ. ಇರಾನ್ ಜತೆಗಿನ ಉದ್ವಿಗ್ನ ಪರಿಸ್ಥಿತಿ ತಿಳಿಯಾಗಿರುವುದು ಮತ್ತು ಆ ದೇಶದ ವಿರುದ್ಧದ ಆರ್ಥಿಕ ದಿಗ್ಬಂಧನಗಳಲ್ಲಿ ಸಡಿಲಿಕೆ ಮಾಡಿರುವುದು ಕೂಡ ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆಯಾಗುವ ಸಾಧ್ಯತೆಗಳು ಇವೆ.
ರಾಷ್ಟ್ರೀಯ ಮಟ್ಟದಲ್ಲಿ 2013ನೆ ವರ್ಷವನ್ನು ಖಂಡಿತವಾಗಿಯೂ ನೆನಪಿನಲ್ಲಿ ಇಟ್ಟುಕೊಳ್ಳಲು ಮನಸ್ಸು ಬರುವುದಿಲ್ಲ. ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ದಿಗಿಲು ಮೂಡಿಸುತ್ತದೆ. `ಜಿಡಿಪಿ' ದರವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳಪೆ ಮಟ್ಟದಲ್ಲಿ ದಾಖಲಾಗಿತ್ತು. ಜತೆಗೆ, ಸಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳದ ಸರ್ಕಾರದ ನಿರ್ಲಕ್ಷ್ಯವೂ ನಿರಾಶಾದಾಯಕ ಪರಿಸ್ಥಿತಿಗೆ ಸಾಕಷ್ಟು ಪುಷ್ಟಿ ನೀಡಿತ್ತು.
ನಮ್ಮದು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಯಾಗಿದ್ದು, ಈ ಹಂತದಲ್ಲಿ ದಾಪುಗಾಲಿನ ಬೆಳವಣಿಗೆಯನ್ನೇ ದಾಖಲಿಸಬೇಕಾಗಿತ್ತು. ಆದರೆ, ವಸ್ತುಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ನಮ್ಮ ಅರ್ಥ ವ್ಯವಸ್ಥೆಯು ಬಸವನಹುಳುವಿನಂತೆ ನಿಧಾನವಾಗಿ ತೆವಳುತ್ತಿದೆ.
ಅರ್ಥ ವ್ಯವಸ್ಥೆಗೆ ಅಗತ್ಯವಾದ ಶಕ್ತಿ ತುಂಬುವಲ್ಲಿ ಕೇಂದ್ರದಲ್ಲಿನ ಆಡಳಿತಾರೂಢ `ಯುಪಿಎ-2' ಸರ್ಕಾರದ ಸಾಮರ್ಥ್ಯವೆಲ್ಲ ಉಡುಗಿ ಹೋಗಿದ್ದು, ಅಧಿಕಾರಾವಧಿಯ ಕೊನೆಯಲ್ಲಿ ತೆವಳಲೂ ಏದುಸಿರು ಬಿಡುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ `ಯುಪಿಎ' ಸರ್ಕಾರದ ಪರಿಸ್ಥಿತಿಯು ಗಾಯಗೊಂಡ ಹೆಳವನಂತೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಬಾಂಧವರಲ್ಲಿ ಬದಲಾವಣೆಯ ಹಸಿವು ಹೆಚ್ಚಿದೆ.
ಅಂತಹ ಬದಲಾವಣೆಯು 2014ರಲ್ಲಿ ನಿಜವಾಗುವ ಸಾಧ್ಯತೆ ಇದೆ. ವರ್ಷದ ಮೊದಲಾರ್ಧದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರ ನಿರ್ಣಾಯಕ ತೀರ್ಪು ಹೊರಬೀಳುವ ಬಗ್ಗೆ ಸ್ಪಷ್ಟ ಸಂಕೇತಗಳು ಕಂಡು ಬರುತ್ತಿವೆ. ಇಂತಹ ನಿರೀಕ್ಷೆಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮಾತ್ರ ಹಾಳು ಮಾಡುವ ಸಾಧ್ಯತೆಗಳೂ ಇವೆ. ದೆಹಲಿ ಸಾಧನೆಯ ಮಾಂತ್ರಿಕತೆಯನ್ನು ರಾಷ್ಟ್ರೀಯ ಮಟ್ಟದಲ್ಲೂ `ಎಎಪಿ' ಸಾಧಿಸಿ ತೋರಿಸಿದರೆ ಎನ್ ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕ್ಷೀಣಿಸಲಿವೆ.
ಮೋದಿ ನಾಯಕತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳು ಅನೇಕರ ಪಾಲಿಗೆ ಅತ್ಯಾಕರ್ಷಕವಾಗಿ ಕಾಣುತ್ತಿದೆ. ಒಂದು ವೇಳೆ ಮೋದಿ ಪ್ರಧಾನಿಯಾದರೆ ವಿದೇಶಿ ಬಂಡವಾಳ ಹರಿವು ಹೆಚ್ಚಬಹುದು, ರಾಜಕೀಯ ಸ್ಥಿರತೆ ಕಂಡುಬರಬಹುದು, ಅರ್ಥ ವ್ಯವಸ್ಥೆಯ ಪ್ರಮುಖ ವಲಯಗಳಲ್ಲಿ ರಚನಾತ್ಮಕ ಹೊಸ ಯೋಜನೆಗಳು ಕಾರ್ಯಗತಗೊಳ್ಳಬಹುದು. ಇದರ ಒಟ್ಟಾರೆ ಪರಿಣಾಮವಾಗಿ ದೇಶದ ಅರ್ಥ ವ್ಯವಸ್ಥೆಯು ತನ್ನ ಈ ಮೊದಲಿನ ಆಕ್ರಮಣಕಾರಿ ಬೆಳವಣಿಗೆ ಪಥಕ್ಕೆ ಮರಳಬಹುದು ಎಂದು ಅನೇಕರು ನಿರೀಕ್ಷಿಸುತ್ತಿದ್ದಾರೆ.
ನಾನು ಇನ್ನೊಂದು ಮಹತ್ವಾಕಾಂಕ್ಷೆಯ ಆಸೆ ಹೊಂದಿದ್ದೇನೆ. 2014ರಲ್ಲಿ ಭ್ರಷ್ಟಾಚಾರವು ಮತ್ತೆ ಕೇಂದ್ರ ಬಿಂದುವಾಗಿ ಗಮನ ಸೆಳೆಯಲಿದ್ದು, ವ್ಯವಸ್ಥೆಯನ್ನು ಶುದ್ಧಗೊಳಿಸುವ ಪ್ರಕ್ರಿಯೆ ಚುರುಕಾಗಲಿದೆ ಎಂದೂ ನಾನು ಆಶಿಸಿರುವೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಮತ್ತು ರಾಜಕೀಯ ಪಕ್ಷಗಳಿಗೆ ತಗುಲಿರುವ ಭ್ರಷ್ಟಾಚಾರದ ಸೋಂಕು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಬಹುದು ಎನ್ನುವುದು ನನ್ನ ನಿರೀಕ್ಷೆಯಾಗಿದೆ. ಮಹಾರಾಷ್ಟ್ರದ ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ರಾಹುಲ್ ಗಾಂಧಿ ನೀಡಿದ ಪ್ರತಿಕ್ರಿಯೆ ಮತ್ತು ಹಣದುಬ್ಬರ ನಿಗ್ರಹಿಸಲು ನೀಡಿದ ಗಡುವಿಗೆ, ದೇಶಿ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷ ಬೀರಿದ ಪ್ರಭಾವವೇ ಮುಖ್ಯ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ದೆಹಲಿಯಲ್ಲಿ ಹೊಸ ಮುಖ್ಯಮಂತ್ರಿಯಾಗುತ್ತಿದ್ದಂತೆ
ಅರವಿಂದ್ ಕೇಜ್ರಿವಾಲ್ ಅವರು ಬದಲಾವಣೆಗೆ ಬೀಸುತ್ತಿರುವ ಚಾಟಿ, ಹೊಸ ಭರವಸೆ ಮೂಡಿಸಿವೆ. ಭ್ರಷ್ಟಾಚಾರವು ಇತರ ಎಲ್ಲ ಪಕ್ಷಗಳಲ್ಲಿ ಸಾಕಷ್ಟು ಭೀತಿ ಮೂಡಿಸಿದ್ದು, ಅಧಿಕಾರಕ್ಕೆ ಎರವಾಗುವ ಆತಂಕವನ್ನೂ ಮೂಡಿಸಿದೆ. ಆಮ್ ಆದ್ಮಿ ಪಕ್ಷದ ಪ್ರಭಾವದಲ್ಲಿ ಇತರ
ರಾಜಕೀಯ ಪಕ್ಷಗಳ ಸಾಧನೆ ಮಸುಕಾಗುವ ಸಾಧ್ಯತೆಗಳೂ ಇವೆ.
ಇನ್ನು, ರಾಜ್ಯದ ವಿಷಯಕ್ಕೆ ಬಂದರೆ, 2013ನೆ ವರ್ಷವು, ರಾಜ್ಯದ ಜನತೆಗೆ ಸಮ್ಮಿಶ್ರ ಫಲ ನೀಡಿದೆ. ಕಾಂಗ್ರೆಸ್ ಪಕ್ಷದ ಪರ ಮತದಾರರು ಸ್ಪಷ್ಟ ಜನಾಭಿಪ್ರಾಯ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಮರಳಿರುವುದು ಮತ್ತು 5 ವರ್ಷಗಳ ಕಾಲ ಅಧಿಕಾರದಲ್ಲಿ ಇರುವುದು ರಾಜ್ಯದ ಪಾಲಿಗೆ ಪ್ರಮುಖ ಸಕಾರಾತ್ಮಕ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಕೊನೆಗೂ ರಾಜಕೀಯ ಸ್ಥಿರತೆ ನೆಲೆಗೊಂಡಿದೆ.
2008-13ರ ಅವಧಿಯಲ್ಲಿ ಬಿಜೆಪಿ ಸರ್ಕಾರದ ಮೂವರು ಮುಖ್ಯಮಂತ್ರಿಗಳು ಬದಲಾದರು. ರಾಜಕೀಯ ಪಕ್ಷಗಳು ಹೋಳಾದವು. ಇಂತಹ ರಾಜಕೀಯ ಅನಿಶ್ಚಿತತೆಯ ಫಲವಾಗಿ ನಮ್ಮ ಜನರು ಸಾಕಷ್ಟು ನಲುಗಿದರು. ಕೈಗಾರಿಕೆಗಳೂ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಯಿತು. ಅದೆಲ್ಲ ಈಗ ಇತಿಹಾಸ ಬಿಡಿ.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರಂಭದ ದಿನದಿಂದಲೇ ಉತ್ತಮ ಆಡಳಿತ ನೀಡಲಿದೆ ಎಂದು ನಾನು ಆಶಿಸಿದ್ದೆ. ಸರ್ಕಾರದ ಇದುವರೆಗಿನ ಸಾಧನೆ ಕಂಡು ನನಗೆ ನಿರಾಶೆಯಾಗಿದೆ. ಸಿದ್ಧರಾಮಯ್ಯ ಅವರಲ್ಲಿ ಈ ಹಿಂದೆ ಇದ್ದ ಚುರುಕು, ಉತ್ಸಾಹದ ಗುಣಗಳು ನನಗೆ ಈಗ ಕಾಣುತ್ತಿಲ್ಲ. ಅವರಲ್ಲಿದ್ದ ಇಂತಹ ಗುಣಗಳೇ ನನ್ನ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದ್ದವು. ಹಲವಾರು ವಲಯಗಳಲ್ಲಿನ ಚಟುವಟಿಕೆಗಳು ಕುಂಠಿತಗೊಂಡಿದ್ದು, 2014ರಲ್ಲಿ ಮಾತ್ರ ರಾಜ್ಯವು ಉತ್ತಮ ದಿನಗಳನ್ನು ಕಂಡೀತು ಎಂದು ಆಶಿಸಬಹುದು.
ನಾನು 1960ರಿಂದಲೇ ಬೆಂಗಳೂರಿನ ನಿವಾಸಿಯಾಗಿದ್ದು, ಈ ಅದ್ಭುತ ನಗರದಲ್ಲಿಯೇ ಬೆಳೆದು ದೊಡ್ಡವನಾಗಿರುವೆ. ಅನೇಕ ಸರ್ಕಾರಗಳು ಬಂದು ಹೋಗಿವೆ, ಮುಖ್ಯಮಂತ್ರಿಗಳು ಬದಲಾಗಿದ್ದಾರೆ, ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಅನೇಕ ಕಮಿಷನರ್ ಗಳು ಬಂದು ಹೋಗಿದ್ದಾರೆ. ಅವರಿಂದ ಬೆಂಗಳೂರು ಮಹಾನಗರಕ್ಕೆ ಹೆಚ್ಚಿನ ಒಳಿತೇನೂ ಆಗಿಲ್ಲ.
ಬೆಂಗಳೂರಿನ ಮೂಲ ಸೌಕರ್ಯಗಳು ಇಷ್ಟು ಹದಗೆಟ್ಟ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ. 2013ರಲ್ಲಿ ಬೆಂಗಳೂರು ಮಹಾನಗರದ ರಸ್ತೆಗಳು ಹಿಂದೆಂದೂ ಇಲ್ಲದಷ್ಟು ಹದಗೆಟ್ಟು ಹಳ್ಳ ಹಿಡಿದಿವೆ. ಓದುಗರೂ ನನ್ನ ಅನಿಸಿಕೆಗೆ ಸಮ್ಮತಿ ಸೂಚಿಸುವಿರಿ ಎನ್ನುವುದನ್ನು ನಾನು ಬಲ್ಲೆ. ರಸ್ತೆಗಳ ಗುಂಡಿ ಮುಚ್ಚಿ, ದುರಸ್ತಿ ಮಾಡಲು ಮರೆಯಬೇಡಿ ಎಂದು ನಾನು ಈ ಅಂಕಣದ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವೆ. ತೆರಿಗೆ ಹಣದಲ್ಲಿ ಅಧಿಕಾರಿಗಳು ಮಾಡಬಹುದಾದ ಕನಿಷ್ಠ ಕೆಲಸ ಇದಾಗಿದೆ.
ಪರಸ್ಪರ ಸಂಪರ್ಕ ಹೊಂದಿರುವ ಆಧುನಿಕ ಜಗತ್ತಿನಲ್ಲಿ ಸಣ್ಣ ಪುಟ್ಟ ಸಂಗತಿಗಳೂ ಇಡೀ ಉತ್ಸಾಹವನ್ನೇ ಉಡುಗಿಸಬಲ್ಲವು. ನಾನು ಮಾತ್ರ ಆಶಾವಾದಿಯಾಗಿರುವೆ. ಹೊಸ ವರುಷದಲ್ಲಿ ನಿರೀಕ್ಷಿಸಿದ ಬದಲಾವಣೆಗಳು ಘಟಿಸಲಿ ಎಂದು ಆಶಿಸುತ್ತ ಇನ್ನೊಮ್ಮೆ ನನ್ನ ಓದುಗರಿಗೆ ಹೊಸ ವರ್ಷದ ಶುಭಾಶಯ ಕೋರುವೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.