ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಭೆಯೊಂದು ಏರ್ಪಾಡಾಗಿತ್ತು. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದರು. ಸಂಸದ, ಶಾಸಕರು, ಜಿಲ್ಲಾ– ನಗರ ಕಾಂಗ್ರೆಸ್ ಪದಾಧಿಕಾರಿಗಳೂ ಸೇರಿದಂತೆ 50ಕ್ಕೂ ಅಧಿಕ ನಾಯಕರು ವೇದಿಕೆಯ ಮೇಲಿದ್ದರು. ಸಭೆ ಆರಂಭವಾಗಿ ಒಂದು ಗಂಟೆಯ ನಂತರ ಬರುತ್ತಿದ್ದ ಅನೇಕರು ನೇರವಾಗಿ ವೇದಿಕೆ ಏರಿ ಬಿಡುತ್ತಿದ್ದರು. ಆದರೆ ಮೊದಲೇ ಅಲ್ಲಿ ಕುಳಿತಿದ್ದವರು ಇಂಥವರಿಗೆ ಕುರ್ಚಿ ಬಿಟ್ಟು ಕೊಡುತ್ತಿರಲಿಲ್ಲ. ಕೆಲವರು ಹಿಂದೆ ಇದ್ದ ಖಾಲಿ ಕುರ್ಚಿಯನ್ನು ಮುಂದೆ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಕುರ್ಚಿ ಸಿಗದೆ ನಿಂತವರೇ ಹೆಚ್ಚು. ದಿನೇಶ್ ಗುಂಡೂರಾವ್ ಮಾತನಾಡಲು ಶುರು ಮಾಡಿದಾಗಲಂತು ಅವರ ಹಿಂದೆ ಅನೇಕರು ನಿಂತಿದ್ದರು.