ಮೂರ್ತಿಗೆ ರಾಜ್ಯಸಭೆ ಟಿಕೆಟ್ ಕಾಂಗೈ ಪಟ್ಟಿಯಲ್ಲಿ ಪೂಜಾರಿ, ಹನುಮಂತಪ್ಪ, ಸಿ.ಎಂ. ಇಬ್ರಾಹಿಂ
ನವದೆಹಲಿ, ಜ. 20– ಕರ್ನಾಟಕದ ಕಾಂಗೈ ಬಿಕ್ಕಟ್ಟಿಗೆ ನೀಡಿದ ಪರಿಹಾರ ಸೂತ್ರದಂತೆ ರಾಜಶೇಖರಮೂರ್ತಿ ಅವರನ್ನು ರಾಜ್ಯಸಭೆ ಸ್ಥಾನಕ್ಕೆ ಒಪ್ಪಿಕೊಳ್ಳುವಂತೆ ಅವರ ಮನವೊಲಿಸುವಲ್ಲಿ ಪಕ್ಷದ ವರಿಷ್ಠ ಮಂಡಲಿ ಯಶಸ್ವಿಯಾಗಿದೆ.
ಇಂದು ರಾತ್ರಿ ಪ್ರಕಟಿಸಿದ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂರ್ತಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ, ಹಾಲಿ ಸದಸ್ಯ ಎಚ್. ಹನುಮಂತಪ್ಪ ಮತ್ತು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರಿಗೆ ಕಾಂಗೈ ಟಿಕೆಟ್ ದೊರೆತಿದೆ.
ರಾಜಶೇಖರ ಮೂರ್ತಿ ಅವರು ಕರ್ನಾಟಕ ಬಿಕ್ಕಟ್ಟು ಪರಿಹರಿಸಲು ನೀಡಲಾದ ಸೂತ್ರವನ್ನು ಒಪ್ಪಿಕೊಂಡಿರುವುದಾಗಿ ವೀಕ್ಷಕ ಮತ್ತು ಕರ್ನಾಟಕದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದ ಡಾ. ಜಗನ್ನಾಥ್ ಮಿಶ್ರಾ ಇದಕ್ಕೂ ಮುನ್ನ ತಿಳಿಸಿದರು.
ಹಂತಹಂತವಾಗಿ ಗುರುತು ಚೀಟಿ: ಶೇಷನ್ ತಿರಸ್ಕಾರ
ನವದೆಹಲಿ, ಜ. 20– ಹಂತ ಹಂತವಾಗಿ ಮತದಾರರಿಗೆ ಗುರುತು ಚೀಟಿಯನ್ನು ನೀಡುವ ಸರ್ಕಾರದ ಪ್ರಸ್ತಾಪವನ್ನು ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಇಂದು ತಿರಸ್ಕರಿಸಿದರು. ಗುರುತು ಚೀಟಿ ನೀಡಲು ಕಾಲಮಿತಿ ವಿಸ್ತರಿಸಬೇಕು ಎಂಬ ರಾಜ್ಯ ಮುಖ್ಯಮಂತ್ರಿಗಳ ಸಭೆಯ ಕೋರಿಕೆಯನ್ನೂ ಅವರು ತಳ್ಳಿಹಾಕಿದರು.
ಇದರಿಂದಾಗಿ ಈ ವಿಷಯದಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಸಂಘರ್ಷ ನಡೆಯುವ ಲಕ್ಷಣಗಳಿವೆ.