ಕೆಪಿಎಸ್ಸಿ ಪರೀಕ್ಷೆಯಲ್ಲಿ ಗ್ರಾಮೀಣರಿಗೆ ಕೃಪಾಂಕ ಬೆಂಗಳೂರು, ಮಾರ್ಚಿ 30– ಕೆಎಎಸ್ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುವ ಶೇಕಡ 70ರಷ್ಟು ಹುದ್ದೆಗಳ ನೇಮಕದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ‘ಕೃಪಾಂಕ’ ನೀಡುವ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿಎಚ್.ಡಿ. ದೇವೇಗೌಡ ಇಂದು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ, ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಮಲ್ಲಣ್ಣ ಅವರಿಗೆ ಈ ವಿಷಯ ತಿಳಿಸಿದ ಅವರು, 1993– 94ರ ಕೆಎಎಸ್ ಪರೀಕ್ಷೆಯ ಉತ್ತರಪತ್ರಿಕೆಗಳ ತಪ್ಪು ಮೌಲ್ಯಮಾಪನಕ್ಕೆ ಕಾರಣರಾದವರನ್ನು ತನ್ನ ಪರಿಮಿತಿಯಲ್ಲಿ ಶಿಕ್ಷಿಸಲು ಸಾಧ್ಯವೇ ಎಂಬ ವಿಷಯವನ್ನು ಸರ್ಕಾರ ಪರಿಶೀಲಿಸುತ್ತದೆ ಎಂದೂ ಹೇಳಿದರು.
ಬಿಹಾರದಲ್ಲಿ ದಳ, ಎಡಪಕ್ಷ ಕೂಟ ಮುನ್ನಡೆ ಪಟ್ನಾ, ಮಾರ್ಚಿ 30 (ಪಿಟಿಐ, ಯುಎನ್ಐ)– ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನತಾ ದಳ ಮತ್ತು ಅದರ ಮಿತ್ರಪಕ್ಷಗಳಾದ ಎಡಪಕ್ಷಗಳು ತಮ್ಮ ಸ್ಥಿತಿಯನ್ನು ಭದ್ರಪಡಿಸಿಕೊಂಡಿದ್ದು ಬಹುಮತದತ್ತ ಸಾಗಿವೆ.
ವಿಧಾನಸಭೆಯ 324 ಕ್ಷೇತ್ರಗಳ ಪೈಕಿ ಐದು ಹಂತದಲ್ಲಿ 320 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಅಭ್ಯರ್ಥಿ ಹತ್ಯೆ ಕಾರಣಕ್ಕೆ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಲಾಗಿದೆ. 11 ಕ್ಷೇತ್ರಗಳಲ್ಲಿ ಚುನಾವಣಾ ಕಾಲಕ್ಕೆ ನಡೆದ ಅಕ್ರಮದ ಬಗ್ಗೆ ತನಿಖೆ ನಡೆದಿದೆ. ಲಾಲೂ ಪ್ರಸಾದ್ ಯಾದವ್ ಅವರು ದಾನಪುರ ಕ್ಷೇತ್ರದಲ್ಲಿ ತಮ್ಮ ಬಿಜೆಪಿ ಪ್ರತಿಸ್ಪರ್ಧಿಗಿಂತ ಗಣನೀಯ ಮುನ್ನಡೆ ಸಾಧಿಸಿದ್ದಾರೆ.