ಬೆಂಗಳೂರು, ಜುಲೈ 24– ಚಿತ್ರದುರ್ಗದಿಂದ 13. ಕಿ.ಮೀ. ದೂರವಿರುವ ಮಾದನಾಯ ಕನಹಳ್ಳಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಸುನಿಲ್ (30) ಸೇರಿದಂತೆ ಇಬ್ಬರು ಮೃತಪಟ್ಟು, ಜನಪ್ರಿಯ ತಾರೆ ಮಾಲಾಶ್ರೀ ಮತ್ತು ಸುನಿಲ್ ಸೋದರ ಗಾಯಗೊಂಡರು.
ಬೆಳಿಗ್ಗೆ 6.15ರ ಸಮಯದಲ್ಲಿ ಸುನಿಲ್ ಹಾಗೂ ಮಾಲಾಶ್ರೀ ಪ್ರಯಾಣಿಸುತ್ತಿದ್ದ ಕಾಂಟೆಸಾ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು. ಕಾರಿನ ಚಾಲಕ ಕೃಷ್ಣ ಅಲಿಯಾಸ್ ರಾಜು (26) ಸ್ಥಳದಲ್ಲೇ ಮೃತಪಟ್ಟರು. ಎರಡೂ ಕಾಲುಗಳು ಮುರಿದು ತಲೆಗೆ ತೀವ್ರವಾಗಿ ಗಾಯವಾಗಿದ್ದ ಸುನಿಲ್ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 1.30ರ ಸಮಯದಲ್ಲಿ ಕೊನೆಯುಸಿರೆಳೆದರು.
ಮಾಲಾಶ್ರೀ ಅವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಚಿತ್ರದುರ್ಗ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸುನಿಲ್ ಸೋದರ ಸಚ್ಚಿನ್ ಅವರಿಗೂ ತೀವ್ರವಾದ ಗಾಯಗಳಾಗಿವೆ. ಅವರ ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಇಬ್ಬರನ್ನೂ ಇಲ್ಲಿನ ನಿಮ್ಹಾನ್ಸ್ಗೆ ಸೇರಿಸಲಾಗಿದೆ.
ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಶನಿವಾರ ಸಂಜೆ ರಸಮಂಜರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಅವರು ಬೆಂಗಳೂರಿಗೆ ಬರುತ್ತಿದ್ದರು.