ಗಡಿ ವಿವಾದದ ಬಗ್ಗೆ ಕೇಂದ್ರದ ಏಕಪಕ್ಷೀಯ ನಿರ್ಧಾರ? ರಾಜ್ಯದ ಶಂಕೆ
ಬೆಂಗಳೂರು, ಸೆ. 29– ಮೈಸೂರು ಮಹಾರಾಷ್ಟ್ರ ಗಡಿ ವಿವಾದವನ್ನು ಅಕ್ಟೋಬರ್ 13ರೊಳಗೆ ಇತ್ಯರ್ಥಗೊಳಿಸಬೇಕೆಂದು ಮಹಾರಾಷ್ಟ್ರವು ಕೇಂದ್ರಕ್ಕೆ ತಿಳಿಸಿದುದರಿಂದ, ಕೇಂದ್ರವು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಹುದೇನೋ ಎಂಬ ಶಂಕೆ ಮೈಸೂರು ಸರ್ಕಾರಕ್ಕೂ ಮೂಡಿದೆ.
‘ಆ ರೀತಿ ಶಂಕೆ ಬಂದುದರಿಂದ, ಈಗಾಗಲೇ ಪ್ರಧಾನಿಯವರಿಗೆ ಪತ್ರ ಬರೆದು ನಮ್ಮ ಕಳಕಳಿಯ ನಿಲುವು ಸ್ಪಷ್ಟಪಡಿಸಿದ್ದೇವೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ದಕ್ಷಿಣ ಜಿಲ್ಲೆಯಲ್ಲಿ ಬಸ್ಸುಗಳು ಸಾಲದೆಂಬ ದೂರು ಸರ್ಕಾರಕ್ಕೆ ಬಂದಿಲ್ಲ
ಬೆಂಗಳೂರು, ಸೆ. 29– ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಕರಣಗೊಂಡ ಮಾರ್ಗಗಳಲ್ಲಿ ಬಸ್ಸುಗಳು ಸಾಲದು ಎಂಬ ದೂರು ಸರ್ಕಾರಕ್ಕೆ ಬಂದಿಲ್ಲ ಎಂದು ಸಾರಿಗೆ ಮಂತ್ರಿ ಶ್ರೀ ಮಹಮ್ಮದಾಲಿ ಅವರು ಇಂದು ವಿಧಾನಸಭೆಯಲ್ಲಿ ಶ್ರೀ ಬಿ.ಎಂ.ಇದಿನಬ್ಬ ಅವರಿಗೆ ತಿಳಿಸಿದರು.
ಈ ಜಿಲ್ಲೆಯ ರಾಷ್ಟ್ರೀಕರಣಗೊಂಡ 31 ಮಾರ್ಗಗಳಲ್ಲಿ 95 ಬಸ್ಸುಗಳು ಓಡಾಡುತ್ತಿವೆ ಎಂದು ಪ್ರಶ್ನೋತ್ತರ ಕಾಲದಲ್ಲಿ ಹೇಳಿದರು.