ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪಕ್ಷಾಂತರ ನಿಷೇಧ ಕಾನೂನಿಗೆ ಬೇಕು ಬಲ

ರಾಜಕೀಯದಲ್ಲಿ ‘ನಡವಳಿಕೆ, ಸಾಮರ್ಥ್ಯಕ್ಕೆ’ ಪ್ರಾಧಾನ್ಯ ಸಿಗಬೇಕೆಂದಾದರೆ ಕಾನೂನಿನಲ್ಲಿ ಬದಲಾವಣೆ ಅಗತ್ಯ
Last Updated 6 ಮೇ 2022, 19:39 IST
ಅಕ್ಷರ ಗಾತ್ರ

ಜನಪ್ರತಿನಿಧಿಗಳು ಸಾಮೂಹಿಕವಾಗಿ ಪಕ್ಷಾಂತರ ಮಾಡುವುದನ್ನು ತಡೆಯುವಲ್ಲಿ ಪಕ್ಷಾಂತರ ನಿಷೇಧ ಕಾನೂನು ಸೋತಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈಚೆಗೆ ಹೇಳಿದ್ದಾರೆ. ಈ ರೀತಿಯ ಪಕ್ಷಾಂತರ ತಡೆಯಲು ಕಾನೂನು ತಿದ್ದುಪಡಿ ಸೂಚಿಸಿದ್ದಾರೆ. ಈಚಿನ ವರ್ಷಗಳಲ್ಲಿ ಹಲವು ಪಕ್ಷಾಂತರಗಳನ್ನು ಬಿಜೆಪಿ ಮುಖಂಡರೇ ಮಾಡಿಸಿರುವ ಕಾರಣ, ಹಿಂದೆ ಬಿಜೆಪಿ ಅಧ್ಯಕ್ಷರಾಗಿದ್ದ ನಾಯ್ಡು ಅವರು ಈ ಮಾತುಗಳನ್ನು ಹೇಳಿರುವುದು ದಿಟ್ಟ ನಡೆ. ಆದರೆ, ಈ ಮಾತುಗಳನ್ನು ನಾಯ್ಡು ಅವರು ಬಿಜೆಪಿಯ ನಾಯಕನಾಗಿ ಅಲ್ಲ, ಉಪರಾಷ್ಟ್ರಪತಿಯಾಗಿ ಆಡಿದ್ದಾರೆ. ಹೀಗಾಗಿ, ಅವರ ಮಾತುಗಳು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗುವುದಿಲ್ಲ. ಅಷ್ಟಕ್ಕೂ, ಈ ವಿಚಾರದಲ್ಲಿ ಬಿಜೆಪಿಯೊಂದನ್ನೇ ಏಕೆ ದೂಷಿಸಬೇಕು? ಎಲ್ಲ ಪಕ್ಷಗಳೂ ಈ ಕಾನೂನನ್ನು ಮೆಟ್ಟಿ ನಡೆದಿವೆ.

ತೀರ್ಮಾನವನ್ನು ಕೈಗೊಳ್ಳುವ ಸಂ‍ಪೂರ್ಣ ಅಧಿಕಾರವನ್ನು ವಿಧಾನಸಭೆ/ಲೋಕಸಭೆಯ ಸ್ಪೀಕರ್‌ಗೆ ನೀಡಿರುವುದು ಈ ಕಾನೂನಿನ ಮುಖ್ಯ ಲೋಪ. ಕಾನೂನಿನ ಆಶಯವನ್ನು ವಿಫಲಗೊಳಿಸಲು ಎಲ್ಲ ಪಕ್ಷಗಳೂ ಸ್ಪೀಕರ್‌ ಅವರನ್ನು ಅಸ್ತ್ರವಾಗಿ ಬಳಸಿವೆ. ತಾತ್ವಿಕವಾಗಿ, ಜನಪ್ರತಿನಿಧಿಯೊಬ್ಬ ಸ್ಪೀಕರ್ ಆದ ನಂತರದಲ್ಲಿ ಪಕ್ಷಪಾತಿಯಾಗಿ ಇರುವುದಿಲ್ಲ. ಆದರೆ ವಾಸ್ತವದಲ್ಲಿ, ಆತ ಪಕ್ಷಪಾತಿಯಾಗಿಯೇ ಇರುತ್ತಾನೆ. ಅವರು ತಮ್ಮ ಪಕ್ಷದ ನಾಯಕತ್ವ ಹೇಳಿದಂತೆಯೇ ಮಾಡುತ್ತಾರೆ.

ಸದನದ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ಬಗ್ಗೆ ಸ್ಪೀಕರ್‌ ತೀರ್ಮಾನ ಕೈಗೊಳ್ಳದಿರಲಿ ಎಂದು ಪಕ್ಷದ ನಾಯಕತ್ವವು ಬಯಸುತ್ತದೆ. ಆಗ ಅರ್ಜಿಯನ್ನು ನಿಷ್ಪ್ರಯೋಜಕವಾಗಿಸಲು ನಾಯಕತ್ವಕ್ಕೆ ಸಾಧ್ಯವಾಗುತ್ತದೆ. ನಾಯಕರು ಹೇಳಿ
ದ್ದನ್ನು ಜಾಣತನದಿಂದ ಅನುಸರಿಸುವ ಸ್ಪೀಕರ್, ಅರ್ಜಿಯ ವಿಚಾರಣೆಗೆ ದೀರ್ಘ ಅವಧಿ ತೆಗೆದುಕೊಳ್ಳುತ್ತಾರೆ.

ಸ್ಪೀಕರ್‌ ಅವರನ್ನು ಯಾರೂ ಪ್ರಶ್ನಿಸಲಾಗದು. ಸ್ಪೀಕರ್ ತೋರುವ ಪಕ್ಷಪಾತಿ ಧೋರಣೆಯನ್ನು ಅರ್ಜಿದಾರರು ಸಹಿಸಿಕೊಳ್ಳಬೇಕು. ಅರ್ಜಿ ವಿಚಾರವಾಗಿ ಸ್ಪೀಕರ್ತೀರ್ಮಾನ ಕೊಡುವವರೆಗೆ ನ್ಯಾಯಾಂಗ ಕೂಡ ಅವರನ್ನು ಪ್ರಶ್ನಿಸಲಾಗದು. ಇದರಿಂದಾಗಿ ಪಕ್ಷಾಂತರಿಗಳಿಗೆ ತಕ್ಷಣವೇ ಅಧಿಕಾರ ನೀಡಲು ಪಕ್ಷಗಳಿಗೆ ಸಾಧ್ಯವಾಗುತ್ತದೆ.

ಸಂವಿಧಾನದ 52ನೇ ತಿದ್ದುಪಡಿ ಕಾಯ್ದೆ– 1985ರ ಮೂಲಕ ಪಕ್ಷಾಂತರ ನಿಷೇಧ ಕಾನೂನನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಅದಾದ 35 ವರ್ಷಗಳವರೆಗೆ ಸ್ಪೀಕರ್‌ಗಳು ತಮ್ಮ ಪಕ್ಷದ ನಾಯಕರ ಜೊತೆ ಶಾಮೀಲಾಗಿ ವಿಚಾರಣೆಗಳನ್ನು ದೀರ್ಘವಾಗಿಸುತ್ತಿದ್ದರು. ಆದರೆ, 2020ರ ಆರಂಭದಲ್ಲಿ ಥೌನಾಓಜಂ ಶ್ಯಾಮ್‌ಕುಮಾರ್ ಸಿಂಗ್ ಪ್ರಕರಣದ ನಂತರ ಪರಿಸ್ಥಿತಿ ಬದಲಾಯಿತು.

ಸಿಂಗ್ ಅವರು 2017ರಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆದು ಶಾಸಕರಾಗಿ ಚುನಾಯಿತರಾಗಿದ್ದರು. ಚುನಾಯಿತರಾದ ನಂತರದಲ್ಲಿ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಅವರಿಗೆ ಹಲವು ಖಾತೆಗಳನ್ನು, ಸಂಪುಟ ದರ್ಜೆ ಸ್ಥಾನವನ್ನು ನೀಡ
ಲಾಯಿತು. ಸಿಂಗ್ ಅವರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯನ್ನು ಸ್ಪೀಕರ್ ವೈ. ಖೇಮ್‌ಚಂದ್ ಅವರು ‘ನ್ಯಾಯಸಮ್ಮತ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂಬ ಸೂಚನೆ ನೀಡಿ ಎಂದು ಕೋರಿ ಕಾಂಗ್ರೆಸ್ ಪಕ್ಷವು ಮಣಿಪುರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಆದರೆ, ಸ್ಪೀಕರ್‌ಗೆ ಹೀಗೆ ನಿರ್ದೇಶನವನ್ನು ಹೈಕೋರ್ಟ್ ನೀಡಬಹುದೇ ಎಂಬ ಪ್ರಶ್ನೆಯು ಸುಪ್ರೀಂ ಕೋರ್ಟ್ ಎದುರು ವಿಚಾರಣೆಯ ಹಂತದಲ್ಲಿರುವ ಕಾರಣ ತಾನು ಯಾವುದೇ ಆದೇಶ ನೀಡುವುದಿಲ್ಲ ಎಂದು ಹೈಕೋರ್ಟ್‌ ಆ ಅರ್ಜಿಯನ್ನು ತಿರಸ್ಕರಿಸಿತು. ಪಕ್ಷವು 2018ರ ಜನವರಿಯಲ್ಲಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಸ್ಪೀಕರ್ ಕೂಡ ಅರೆನ್ಯಾಯಿಕ ಅಧಿಕಾರಿ, ಅವರು ನ್ಯಾಯಸಮ್ಮತ ಅವಧಿಯೊಳಗೆ ತೀರ್ಮಾನ ಕೈಗೊಳ್ಳಬೇಕು – ಅಂದರೆ, ಶಾಸನಸಭೆಯ ಅವಧಿಯಾದ ಐದು ವರ್ಷಕ್ಕೂ ಮುನ್ನ – ಎಂದು ಹೈಕೋರ್ಟ್‌ ಹೇಳಿತಾದರೂ, ಆದೇಶ ನೀಡಲಿಲ್ಲ.

ಇದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ನ್ಯಾಯಮೂರ್ತಿ ಆರ್.ಎಫ್. ನರಿಮನ್ ನೇತೃತ್ವದ ತ್ರಿಸದಸ್ಯ ಪೀಠವು, ಅನರ್ಹತೆಗೆ ಸಂಬಂಧಿಸಿದ ಅರ್ಜಿಯನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಪಡಿಸುವಂತೆ ಸ್ಪೀಕರ್ ಖೇಮ್‌ಚಂದ್ ಅವರಿಗೆ ಸೂಚಿಸಿತು. ಸ್ಪೀಕರ್‌ಗೆ ತೀರ್ಮಾನ ಕೈಗೊಳ್ಳಲು ಕೋರ್ಟ್‌ ಕಾಲಮಿತಿ ವಿಧಿಸಿದ್ದು ಅದೇ ಮೊದಲು. ಆದರೆ ಖೇಮ್‌ಚಂದ್ ಅವರು ನಾಲ್ಕು ವಾರಗಳಲ್ಲಿ ಆದೇಶ ಹೊರಡಿಸಲಿಲ್ಲ. ಬದಲಿಗೆ, ಹೆಚ್ಚುವರಿಯಾಗಿ ಹತ್ತು ದಿನಗಳ ಅವಕಾಶ ಕೋರಿದರು. ಹತ್ತು ದಿನಗಳು ಪೂರ್ಣಗೊಂಡ ನಂತರ, ಇನ್ನೂ ಹದಿನೈದು ದಿನಗಳು ಬೇಕು ಎಂದರು. ಆಗ ಸುಪ್ರೀಂ ಕೋರ್ಟ್, ಸಿಂಗ್ ಅವರನ್ನು ಸಂಪುಟದಿಂದ ತೆಗೆದುಹಾಕಿತು, ಅವರು ಮುಂದಿನ ಆದೇಶದವರೆಗೆ ವಿಧಾನಸಭೆ ಪ್ರವೇಶಿಸುವಂತಿಲ್ಲ ಎಂದು ಹೇಳಿತು.

ಸಂವಿಧಾನದ 212ನೇ ವಿಧಿಯ ಪ್ರಕಾರ, ಶಾಸನಸಭೆಯ ನಡಾವಳಿಗಳಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಂಗಕ್ಕೆ ಅಧಿಕಾರವಿಲ್ಲ. ಸ್ಪೀಕರ್ ಸ್ಥಾನದಲ್ಲಿರುವವರು ಈ ವಿಧಿಯ ಅಡಿಯಲ್ಲಿ ರಕ್ಷಣೆ ಪಡೆದು, ತಮ್ಮ ನಾಯಕರು ಹೇಳಿದ ಆಟ ಆಡುತ್ತಿದ್ದರು. ಆದರೆ, ಸಿಂಗ್ ಪ್ರಕರಣದಲ್ಲಿ ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಯಾವುದೇ ತೀರ್ಮಾನ ಕೈಗೊಳ್ಳದ ಕಾರಣದಿಂದಾಗಿ, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಆದೇಶ ನೀಡಿತು. ಈ ವಿಧಿಯು ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ತೀರ್ಪು ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ಗೆ ನೀಡಿದೆ.

ಇದಾದ ಸರಿಸುಮಾರು ಒಂದು ವರ್ಷದ ನಂತರ, ಗೋವಾದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ತೀರ್ಮಾನ ಕೈಗೊಳ್ಳಲು ಸ್ಪೀಕರ್‌ಗೆ ಕಾಲಮಿತಿ ನಿಗದಿ ಮಾಡಿತು. 2019ರ ಜುಲೈನಲ್ಲಿ ಕಾಂಗ್ರೆಸ್ಸಿನ ಹತ್ತು ಶಾಸಕರು, ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಅವರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ವಿಚಾರವಾಗಿ ಸ್ಪೀಕರ್ ಒಂದೂವರೆ ವರ್ಷ ತೀರ್ಮಾನ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಯಿತು. 2021ರ ಏಪ್ರಿಲ್ 20ರೊಳಗೆ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು. ಮುಕುಲ್ ರಾಯ್ ಅವರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ವಿಚಾರವಾಗಿ ಕಾಲಮಿತಿಯಲ್ಲಿ ತೀರ್ಮಾನಿಸುವಂತೆ ಪಶ್ಚಿಮ ಬಂಗಾಳ ಸ್ಪೀಕರ್‌ಗೆ ಅದೇ ವರ್ಷದಲ್ಲಿ ಕಲ್ಕತ್ತಾ ಹೈಕೋರ್ಟ್‌ ತಾಕೀತು ಮಾಡಿತು.

ಇವುಗಳ ಸಾರಾಂಶ ಸ್ಪಷ್ಟವಾಗಿದೆ. ಪಕ್ಷಾಂತರ ನಿಷೇಧ ಕಾನೂನು ಪರಿಣಾಮಕಾರಿಯಾಗಬೇಕು ಎಂದಾದರೆ, ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸ್ಪೀಕರ್‌ ಅವರಿಂದ ಹಿಂದಕ್ಕೆ ಪಡೆಯುವ ರೀತಿಯಲ್ಲಿ ಕಾನೂನು ತಿದ್ದುಪಡಿ ಆಗಬೇಕು. ಆ ಅಧಿಕಾರವನ್ನು ಸ್ವತಂತ್ರ ಪ್ರಾಧಿಕಾರವೊಂದರ ಕೈಯಲ್ಲಿ ಇರಿಸಬೇಕು. ‘ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯ ಮಂಡಳಿಯ ಕೈಗೆ ಅಥವಾ ಬೇರೆ ಯಾವುದಾದರೂ ಹೊರಗಿನ ಸ್ವತಂತ್ರ ವ್ಯವಸ್ಥೆಗೆ ಈ ಅಧಿಕಾರವನ್ನು ನೀಡುವ ರೀತಿಯಲ್ಲಿ ಸಂವಿಧಾನಕ್ಕೆ ತಿದ್ದಪಡಿ ತರುವ ಬಗ್ಗೆ ಸಂಸತ್ತು ಗಂಭೀರವಾಗಿ ಪರಿಶೀಲಿಸಬಹುದು’ ಎಂದು ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯಸಮ್ಮತವಾದ ಕಾಲಮಿತಿಯಲ್ಲಿ ತೀರ್ಮಾನಿಸುವ ಸ್ವತಂತ್ರ ಪ್ರಾಧಿಕಾರ ಮಾತ್ರವೇ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಅವಕಾಶವಾದಿ ಒಪ್ಪಂದಕ್ಕೆ ಬರುವುದನ್ನು ತಡೆಯಬಹುದು, ಜನರ ಆದೇಶವು ವಿರೂಪಗೊಳ್ಳದಂತೆ ನೋಡಿಕೊಳ್ಳಬಹುದು. ಮೂರು ತಿಂಗಳಲ್ಲಿ ಅರ್ಜಿಗಳು ಇತ್ಯರ್ಥವಾಗುವಂತೆ ಇರಬೇಕು. ಸಕಾರಣ ಇದ್ದರೆ ಮಾತ್ರ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶ ನೀಡಬಹುದು.

ಪಕ್ಷಾಂತರ ಮಾಡಿದವರು ಶಾಸನಸಭೆಯ ಅದೇ ಅವಧಿಯಲ್ಲಿ ಅಧಿಕಾರ ಹಿಡಿಯುವುದಕ್ಕೆ ಅವಕಾಶ ಇರಬಾರದು. ಪಕ್ಷಾಂತರ ಮಾಡಿದ ನಂತರದಲ್ಲಿ ಯಾವುದೇ ಅಧಿಕಾರ ಸಿಗುವುದಿಲ್ಲ ಎಂದಾದರೆ ಅವರು ಪಕ್ಷಾಂತರ ಏಕೆ ಮಾಡುತ್ತಾರೆ? ರಾಜಕೀಯದಲ್ಲಿ ‘ಶೀಲ, ನಡವಳಿಕೆ ಮತ್ತು ಸಾಮರ್ಥ್ಯಕ್ಕೆ’ ಪ್ರಾಧಾನ್ಯ ಸಿಗಬೇಕು ಎಂದಾದರೆ ಕಾನೂನಿನಲ್ಲಿ ಈ ಬದಲಾವಣೆಗಳನ್ನು ತರಲು ಮುಂದಾಗುವಂತೆ ಸರ್ಕಾರಕ್ಕೆ ಸಲಹೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT