ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ...
Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು ಆಚರಿಸಲಾಗಿದೆ. ಈ ಆಚರಣೆಯ ನೆಪದಲ್ಲಿ ಒಂದಿಷ್ಟು ಚಿಂತನೆಗಳು, ಭಾಷಣಗಳು ಮತ್ತು ಸಭೆ-ಸಮಾರಂಭಗಳು ನಡೆದವು. ಆದರೆ, ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ಕರ್ತವ್ಯವೇನು ಎಂಬುದನ್ನು ಬುದ್ಧಿಪೂರ್ವಕವಾಗಿ ಮರೆಯಲಾಗುತ್ತಿದೆ.

ರಾಷ್ಟ್ರವು ಸ್ವಾತಂತ್ರ್ಯ ಪಡೆದು, ಪರಕೀಯರ ಆಳ್ವಿಕೆ ಕೊನೆಗೊಂಡು, ನಮ್ಮವರ ಆಳ್ವಿಕೆಯು ಮೊದಲ್ಗೊಂಡಿತು. ಸ್ವಾತಂತ್ರ್ಯಪೂರ್ವ ಭಾರತದ ಪರಿಸ್ಥಿತಿ ಬೇರೆಯಾಗಿತ್ತು. ಅಂಬೇಡ್ಕರ್ ಅವರು ದಲಿತ ಪರವಾದ ಹೋರಾಟವನ್ನು ಆರಂಭಿಸಿ, ಶೋಷಣೆಯಿಂದ ಅವರನ್ನು ಮುಕ್ತಗೊಳಿಸ ಬೇಕೆಂದು ಪಣ ತೊಟ್ಟಿದ್ದರು. ಗಾಂಧೀಜಿ ಮತ್ತು ಬಾಬಾ ಸಾಹೇಬರ ನಡುವೆ ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿದ್ದರೂ ಅಂಬೇಡ್ಕರ್‌ ಅವರ ಹೋರಾಟದ ಛಲ, ಸ್ವಾಭಿಮಾನ ಮತ್ತು ಮುತ್ಸದ್ದಿತನವನ್ನು ಬಾಪೂಜಿ ಮೆಚ್ಚಿಕೊಂಡಿದ್ದರು. ಗಾಂಧೀಜಿಯ ಮುಖಂಡತ್ವದಲ್ಲಿ ನಡೆದ ಚಳವಳಿಯಿಂದ ಕೆಲವರಿಗೆ ಮಾತ್ರ ಸ್ವಾತಂತ್ರ್ಯ ಸಿಗುತ್ತದೆ, ದೇಶದ ಶೇ 60-70ರಷ್ಟು ಪ್ರಮಾಣದಲ್ಲಿರುವ ಶೋಷಿತ ಅಥವಾ ದಲಿತ ವರ್ಗಗಳಿಗೆ ಸ್ವಾತಂತ್ರ್ಯ ಸಿಗುವುದು ಅನುಮಾನ ಎಂದಿದ್ದರು ಅಂಬೇಡ್ಕರ್‌. ವಾಸ್ತವದಲ್ಲಿ ಅದು ಸತ್ಯ ಸಹ. ಅಂಬೇಡ್ಕರ್‌ ಅವರ ಈ ಅನಿಸಿಕೆಗೆ ಕಾರಣವಾದರೂ ಏನಿರಬಹುದು?

‘ದೊಡ್ಡ ಪ್ರಮಾಣದಲ್ಲಿರುವ ಶೋಷಿತರನ್ನು ಅಸ್ಪೃಶ್ಯತೆಯ ಕಾರಣ ಒಡ್ಡಿ, ದೂರ ಇಡುತ್ತ ಬರಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ಸಮುದಾಯಗಳಿಗೆ ಸಂಬಂಧಿಸಿದವರು ಎಲ್ಲ ರೀತಿಯ ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ಅನುಭವಿಸುವಂತವರಾಗಿದ್ದಾರೆ. ಈ ವರ್ಗಗಳವರು ಸಬಲವಾಗಿದ್ದು ಸ್ವಾತಂತ್ರ್ಯದ ಸವಿಯನ್ನು ಆಸ್ವಾದಿಸಬಲ್ಲವರಾಗಿದ್ದಾರೆ. ಆದರೆ ನಿಮ್ನ ವರ್ಗದವರು ಜಾತೀಯತೆಯ ಕಾರಣದಿಂದಾಗಿ ಸಾಮಾಜಿಕ ಸಮಾನತೆ, ಧಾರ್ಮಿಕ ಸಮಾನತೆ ಮತ್ತು ಆರ್ಥಿಕ ಸಮಾನತೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಬೃಹತ್ ಪ್ರಮಾಣ ದಲ್ಲಿರುವ ಶೋಷಿತ ಸಮುದಾಯಗಳ ಏಳ್ಗೆಗಾಗಿ ನನ್ನಂಥವರು ಹೋರಾಡಬೇಕಾಗುತ್ತದೆ’ ಎನ್ನುತ್ತಾರೆ. ಈ ಕಾರಣಕ್ಕಾಗಿ ಶೋಷಿತರಿಗೆ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯವನ್ನು ಕೊಡಮಾಡಲಾಗಿದೆ. ಅಂಬೇಡ್ಕರ್‌ ಅವರ ಅನಿಸಿಕೆಯಂತೆ ಶೋಷಿತರು ಮೀಸಲಾತಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರೆ, ಅವರ ಉದ್ಧಾರ ನಿಶ್ಚಿತ.

ಶೋಷಿತ ಮತ್ತು ಅಲಕ್ಷಿತ ಸಮುದಾಯಗಳ ಉದ್ಧಾರ ಕ್ಕಾಗಿ ಬಸವಾದಿ ಶರಣರು ಕ್ರಾಂತಿಯನ್ನುಂಟು ಮಾಡಿ, ಅಸ್ಪೃಶ್ಯತೆ ನಿವಾರಣೆಯ ಅಗತ್ಯದ ಬಗೆಗೆ ಜಾಗೃತಿ ಮೂಡಿಸಿದರು. ಸಮಸಮಾಜವನ್ನು ರಚಿಸಿದರು. ಸಾಮಾಜಿಕ ಅಸಮಾನತೆ, ಧಾರ್ಮಿಕ ಅಸಮಾನತೆ, ಆರ್ಥಿಕ ಅಸಮಾನತೆ ಅಲ್ಲದೆ ಲಿಂಗತಾರತಮ್ಯವನ್ನು ತೊಡೆದುಹಾಕಿ ಸ್ತ್ರೀಯರಿಗೂ ಸಮಾನ ಅವಕಾಶ ನೀಡಿದರು. ಅಂದಿನ ಅನುಭವ ಮಂಟಪವು ಅಲಕ್ಷಿತರಿಗೆ ಸಾಮಾಜಿಕ ಸ್ಥಾನಮಾನ ಕೊಡಮಾಡಿತು. ಶೋಷಿತರು ಮೊದಲ್ಗೊಂಡು ತುಳಿತಕ್ಕೊಳಗಾದ ಎಲ್ಲ ವರ್ಗದವರಿಗೆ ಮೀಸಲಾತಿ ನೀಡುತ್ತದೆ ಸಂವಿಧಾನ.

ಒಂದನ್ನು ಇಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗುತ್ತದೆ- ವರ್ಣಾಶ್ರಮದಲ್ಲಿ ಬರುವ ತ್ರಿ(ಮೂರು) ವರ್ಣದವ ರಿಗೆ ಎಲ್ಲ ರೀತಿಯ ಹಕ್ಕುಗಳು, ಸಮಾನ ಅವಕಾಶಗಳು. ಉಳಿದವರಿಗೆ ಅವರು ಮಾಡಬೇಕಾದಂತಹ ಕರ್ತವ್ಯಗಳನ್ನು ವೇದಾಗಮಗಳಲ್ಲಿ ಪ್ರಸ್ತಾಪಿಸಿದ್ದು, ಯಜು ರ್ವೇದದ ಪುರುಷಸೂಕ್ತವು ಇದಕ್ಕೆ ಸ್ಪಷ್ಟ ಉದಾಹರಣೆ ಎನ್ನುತ್ತಾರೆ ಬಾಬಾಸಾಹೇಬರು. ಮೂರು ವರ್ಗದವರಿಗೆ ವೇದಾಗಮ ಪ್ರಣೀತವಾದ ಧಾರ್ಮಿಕ ಸಂಹಿತೆಯು ಸರ್ವ ರೀತಿಯಲ್ಲೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿದೆ. ಶೂದ್ರರು ಮೇಲಿನ ಮೂರು ವರ್ಗದವರಿಗೆ ನಿಷ್ಠರಾಗಿರ ಬೇಕು, ಅವರಿಗೆ ವಿಧಿಸಿದಂತಹ ಕಟ್ಟು-ಕಟ್ಟಲೆ ಗಳನ್ನು ಮೀರಿ ನಡೆದರೆ, ಎಂಥ ಕಠಿಣವಾದ ಶಿಕ್ಷೆಯನ್ನಾ ದರೂ ಕೊಡಲಾಗುತ್ತಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.

ಬಸವಣ್ಣನವರಿಗಾಗಲೀ ಅಂಬೇಡ್ಕರ್‌ ಅವರಿಗಾಗಲೀ ಚಾತುರ್ವರ್ಣ ಪದ್ಧತಿಯನ್ನು ಸೃಷ್ಟಿಸಿದವರ ಬಗೆಗೆ ಸಾತ್ವಿಕ ವಾದ ಸಿಟ್ಟು ಇರುವುದು ಸಹಜವಾದರೂ ಶೂದ್ರಾತಿಶೂದ್ರರನ್ನು ಮೂರು ವರ್ಗಗಳು ನಿಕೃಷ್ಟವಾಗಿ ಕಾಣುತ್ತ ಬಂದಿರುವುದನ್ನು, ಅವರನ್ನು ಹೊರಗಿಟ್ಟು ಅವಮಾನಿಸುವುದನ್ನು ಖಂಡತುಂಡವಾಗಿ ಖಂಡಿಸುತ್ತಾರೆ. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಈ ಮೂರು ವರ್ಗದವರಿಗೆ ಶೂದ್ರರು ಕೈ ಮುಗಿಯಬೇಕು, ದೀರ್ಘದಂಡ ನಮಸ್ಕಾರ ಮಾಡ ಬೇಕು, ವಿಧಿಸಿದಂತಹ ನಿಯಮಗಳನ್ನು ಉಲ್ಲಂಘಿಸಿ ದವರು ಮರಣದಂಡನೆಗೆ ಒಳಗಾಗಬೇಕೆಂಬ ಕಠಿಣ ವಾದ ಧಾರ್ಮಿಕ ಕಟ್ಟುಕಟ್ಟಲೆಗಳನ್ನು ‘ಶೂದ್ರರು ಯಾರು?’ ಎಂಬ ಗ್ರಂಥದಲ್ಲಿ ಅಂಬೇಡ್ಕರ್‌ ಬಲವಾಗಿ ವಿರೋಧಿಸಿದ್ದಾರೆ. ಇಂಥ ಅಮಾನವೀಯ ಆಚರಣೆಗಳು ಶೂದ್ರ ವರ್ಗಗಳನ್ನು ಅವಮಾನಗೊಳಿಸುತ್ತವೆ. ಈ ವರ್ಗಗಳಿಗೆ ನೀಡಬೇಕಾದ ಅನುಕೂಲಗಳನ್ನು ಕೊಡದೆ ದೂರವಿಟ್ಟು, ಅವರನ್ನು ಮತಬ್ಯಾಂಕ್ ಮಾಡಿಕೊಳ್ಳುತ್ತ ಬರಲಾಗಿದೆ.

ಭಾರತದಲ್ಲಿ ಇರುವವರೆಲ್ಲ ಭಾರತೀಯರೇ. ಸ್ಪೃಶ್ಯ ಭಾರತ ಮತ್ತು ಅಸ್ಪೃಶ್ಯಭಾರತ ಎಂಬ ವಿಭಜನೆ ಸಲ್ಲದು. ಈ ದಿನಮಾನಗಳಲ್ಲಿ ‘ಎಡಗೈ’ ಭಾರತ ಮತ್ತು ‘ಬಲಗೈ’ ಭಾರತ. ಇದು ನಿವಾರಣೆಯಾದಾಗ ಮಾತ್ರ ಒಂದೇ ಭಾರತ; ಏಕಭಾರತ.

ಕರ್ನಾಟಕದ ಲಿಂಗಾಯತ/ ವೀರಶೈವ, ಅದಕ್ಕೆ ಹೊಂದಿಕೊಂಡಿರುವ 80 ಉಪಜಾತಿಗಳು, ಒಕ್ಕಲಿಗ ಮತ್ತಿತರ ಸಮುದಾಯಗಳು ಕೂಡ ಶೂದ್ರವರ್ಗಕ್ಕೆ ಸೇರಿವೆ.ಶೂದ್ರಾತಿಶೂದ್ರ ವರ್ಗಗಳಿಗೆ ಸಿಗಬೇಕಾಗಿರುವ ಮೀಸಲಾತಿ ಸಿಗುವಂತಾಗಲಿ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಜಾತಿಗಳಲ್ಲಿರುವ ಬಡವರಿಗೂ ಮೀಸಲಾತಿ ದೊರಕಲಿ. ಚಾತುರ್ವರ್ಣ ಪದ್ಧತಿ ಅನುಸಾರವಾಗಿ ಲಿಂಗಾಯತ/ವೀರಶೈವರು ಶೂದ್ರವರ್ಗಕ್ಕೆ ಸೇರಿದವರಾಗಿ ದ್ದಾರೆ. ಇವರನ್ನು ಒಬಿಸಿ (ಇತರ ಹಿಂದುಳಿದ ವರ್ಗ) ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯು ಸಮಯೋಚಿತವಾಗಿದೆ. ಸೂಕ್ತ ಮೀಸಲಾತಿಯಿಂದ ವಂಚಿತವಾಗಿರುವ ಇತರೆ ನಿಮ್ನ ಜಾತಿಗಳಿಗೂ ಸಲ್ಲಬೇಕಾದ ಮೀಸಲಾತಿ ಅನುಕೂಲವು ಲಭ್ಯವಾಗಲಿ. ಹಿಂದೆ ಆಗಿರುವ ತಪ್ಪನ್ನು ತನ್ಮೂಲಕ ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶ.

ಬಸವಾದಿ ಶರಣರು ಮತ ಸ್ಥಾಪಕರಲ್ಲ, ಪಥ ಸ್ಥಾಪಕರು. ಪಥವೆಂದರೆ ಮಾರ್ಗ. ಮತವು ಸೀಮಿತ ವಾದರೆ, ಪಥವು ವಿಶಾಲವಾದುದು. ಎಲ್ಲ ಜಾತಿ- ಜನಾಂಗಗಳನ್ನು ಒಳಗೊಳ್ಳುವುದು. ರಾಜಬೀದಿಯಲ್ಲಿ ಸರ್ವರೂ ಕ್ರಮಿಸಲು ಅವಕಾಶವಿದೆ. ಅದರಂತೆ ಪಥವು ಸರ್ವಜನಾಂಗದ ಶ್ರೇಯೋಭಿವೃದ್ಧಿಯನ್ನು ಬಯಸುತ್ತದೆ. ಬಸವಯುಗದಲ್ಲಿ ಶರಣಪಥ ಪ್ರಾರಂಭವಾಗಿ ಸರ್ವ ಜನಾಂಗದ ಶರಣರು ಒಗ್ಗೂಡಿದರು. ಬಸವಪಥವನ್ನು ಒಪ್ಪಿಕೊಂಡವರು ಬಸವಾಯತ ಅಥವಾ ಲಿಂಗಾಯತರಾದರು. ಬಸವಪಥದಿಂದ ದೂರವುಳಿದವರು ವೀರಶೈವರೆಂದು ಗುರುತಿಸಲ್ಪಟ್ಟರು. ಬಸವಪ್ರಣೀತ ಲಿಂಗಾಯತಕ್ಕೆ ವಚನಾಗಮವು ಸಂವಿಧಾನವಾದರೆ, ವೀರಶೈವಕ್ಕೆ ವೇದಾಗಮ ನೀತಿ ಸಂಹಿತೆ. ಈ ಭೇದವನ್ನು ಹೊರತುಪಡಿಸಿದರೆ, ಉಭ ಯತ್ರರು ಇಷ್ಟಲಿಂಗಧಾರಿಗಳು, ಕಾಯಕ ಜೀವಿಗಳು. ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ಮತ್ತಿತರ ಪರಧರ್ಮೀಯರನ್ನು ಸಭೆ-ಸಮಾರಂಭಗಳಿಗೆ ಆಮಂತ್ರಿಸುವ ಮತ್ತು ಅವರೊಟ್ಟಿಗೆ ಸಾಮಾಜಿಕ ಸಾಮರಸ್ಯ ಬೆಸೆಯುವ ಕಾರ್ಯದಲ್ಲಿ ಉಭಯತ್ರರು ಸಹಕರಿಸುತ್ತಿದ್ದಾರೆ. ತಮ್ಮದೇ ಧರ್ಮದವರನ್ನು ಅಥವಾ ಜಾತಿಯವರನ್ನು ಪರಸ್ಪರ ದ್ವೇಷಿಸುವುದು ಸೂಕ್ತವಲ್ಲ. ಉಭಯತ್ರರು ಸಹೋದರ ಭಾವನೆಯೊಂದಿಗೆ ಸಾಗುವುದು ಶ್ರೇಯಸ್ಕರ. ರಾಜಕೀಯ ಲಾಭಕ್ಕಾಗಿ ಸಂಘಟನೆಗಳು ಬಳಕೆ ಆಗಿದ್ದು, ಒಬಿಸಿ ಮೀಸಲಾತಿಗಾಗಿ ಉಭಯತ್ರರು ಒಂದಾಗಿ ಹೋರಾಡುವುದು ಅತ್ಯಂತ ಸಮಂಜಸ.

ಡಾ. ಶಿವಮೂರ್ತಿ ಮುರುಘಾ ಶರಣರು

ಉಭಯ ಬಣಗಳು ಒಂದಾಗುವುದು ಮುಖ್ಯ. ಅದರಂತೆ ಉಪಜಾತಿ ಕೇಂದ್ರಿತವಾದ ಹೋರಾಟಗಳು ಏಕವ್ಯಕ್ತಿ ನೇತೃತ್ವದಲ್ಲಿ ಮುಂದುವರಿದಿರುವುದು ಶ್ರೇಯಸ್ಕರ ಅಲ್ಲ. ಅಂದು ಸ್ವತಂತ್ರ ಲಿಂಗಾಯತಕ್ಕಾಗಿ ಒಗ್ಗೂಡಿ ನಡೆಸಿದಂತಹ ಹೋರಾಟವಾಗಿದ್ದು, ಇಂದು ಅದರೊಟ್ಟಿಗೆ ಗುರುತಿಸಿಕೊಂಡವರು ತಮ್ಮ ಉಪ ಜಾತಿಯ ಮೀಸಲಾತಿಗಾಗಿ ಹೋರಾಡಲು ಮತ್ತು ಸಂಘಟಿತರಾಗಲು ಕರೆ ಕೊಡುತ್ತಿರುವುದು ವಿಪರ್ಯಾಸ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಂತಹ ದಿಸೆಯಲ್ಲಿ ಹಿಡಿಯಾಗಿ ಹೋರಾಡಬೇಕೇ ವಿನಾ ಬಿಡಿ ಯಾಗಿ ಅಲ್ಲ ಎಂಬ ಅರಿವು ಜಾಗೃತವಾಗಬೇಕಿದೆ. ಈ ದಿಸೆಯಲ್ಲಿ ಸಮಗ್ರ ದೃಷ್ಟಿಕೋನ ಬೇಕಾಗುತ್ತದೆ. ಎಲ್ಲ ಜಾತಿಗಳಲ್ಲೂ ರಾಜಕೀಯ ನೇತಾರರು ಇದ್ದಾರೆ. ಅವರ ಸಹಕಾರವನ್ನು ಬಳಸಿಕೊಂಡು ಸಮಾಜದ ಅಭ್ಯುದಯಕ್ಕಾಗಿ ಚಿಂತನೆ ನಡೆಸುವುದು ಈಗಿನ ಕರ್ತವ್ಯವಾಗಿದೆ. ರಾಜಕಾರಣ ಹೇಳಿದಂತೆ ಕೇಳುತ್ತ ಹೋದರೆ, ಧಾರ್ಮಿಕರು ಅವರ ಕೈಗೊಂಬೆ ಆಗಬೇಕಾ ಗುತ್ತದೆ. ಧರ್ಮ ಮತ್ತು ರಾಜಕಾರಣವು ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT