ಈಗ ಸುಮಾರು ನಾಲ್ಕು ತಿಂಗಳುಗಳಿಂದ ಥಾಯ್ಲೆಂಡ್ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇದೆ. ಅದು ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ದೇಶದಲ್ಲಿ ಈಗಷ್ಟೇ ಚುನಾವಣೆಯೂ ನಡೆದಿದೆ. ಆದರೆ ಪ್ರತಿಭಟನಾಕಾರರು ಚುನಾವಣೆ ನಡೆಯಲು ಬಿಡದಿದ್ದ ಬೂತ್ಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಜನ ಮತ ಚಲಾಯಿಸಲು ಆಗಲಿಲ್ಲ ಎಂದು ಅಂದಾಜು ಮಾಡಲಾಗಿದೆ. ಈ ಕ್ಷೇತ್ರಗಳಲ್ಲೆಲ್ಲಾ ಮರುಚುನಾವಣೆ ನಡೆಯಬೇಕಾಗಿದೆ. ಅದು ನಡೆಯುವ ತನಕ ಈಗಾಗಲೇ ಚುನಾವಣೆ ನಡೆದಿರುವ ಕ್ಷೇತ್ರಗಳ ಫಲಿತಾಂಶವೂ ಹೊರಬರುವ ಹಾಗಿಲ್ಲ.
ಅಷ್ಟೇ ಅಲ್ಲ, ಮರು ಚುನಾವಣೆಗಳೆಲ್ಲಾ ಮುಗಿಯುವ ತನಕ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಉಸ್ತುವಾರಿ ಪ್ರಧಾನಿಯಾಗಿ ಮಾತ್ರ ಮುಂದುವರಿಯಲು ಸಾಧ್ಯ. ಇದೇ ಜನವರಿ 21ರಿಂದ ಎರಡು ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಅದನ್ನು ಉಲ್ಲಂಘನೆ ಮಾಡಿದುದರಿಂದ ವಿರೋಧ ಪಕ್ಷದ ನಾಯಕರೂ ಸೇರಿದಂತೆ, ಪ್ರತಿಭಟನೆಯ ನಾಯಕತ್ವ ವಹಿಸಿದ people’s Democratic Reform Committeeಯ ಅಧ್ಯಕ್ಷರಾದ ಸುತೆಪ್ ಥಾಂಗ್ಸುಬಾನ್ ಅವರನ್ನೂ ಬಂಧಿಸಲಾಗಿದೆ.
ರಾಜಕೀಯ ಪಕ್ಷಗಳಿಂದ ಆಗುವ ಅಧಿಕಾರದ ದುರುಪಯೋಗ ತಡೆಯಲು ಚುನಾವಣೆಯ ಮೂಲಕ ಆಗಾಗ ಆಡಳಿತದ ಬದಲಾವಣೆ ಅಗತ್ಯ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಪ್ರಜಾಪ್ರಭುತ್ವವಾದಿಗಳನ್ನೂ ಒಳಗೊಂಡ ಥಾಯ್ ಪ್ರತಿಭಟನಾಕಾರರು ಈಗ ಚುನಾವಣೆ ಬೇಡ ಅನ್ನುತ್ತಿದ್ದಾರೆ. ಇಡೀ ವ್ಯವಸ್ಥೆಯೇ ಬದಲಾಗಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ– ನಮ್ಮ ಅರವಿಂದ ಕೇಜ್ರಿವಾಲ್ ತರಹ. ಚುನಾಯಿತ ಸರ್ಕಾರದ ಬದಲು ಅಧಿಕಾರವನ್ನು ಒಂದು ಪೀಪಲ್ಸ್ ಕೌನ್ಸಿಲ್ಗೆ ಹಸ್ತಾಂತರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
ಥಾಯ್ ರಾಜಕಾರಣದಲ್ಲಿ ದಿನೇ ದಿನೇ ಬದಲಾಗುತ್ತಿರುವ ವಿದ್ಯಮಾನಗಳನ್ನು ಅರ್ಥೈಸುವುದು ಸ್ವಲ್ಪ ಕಷ್ಟ. ಅಲ್ಲಿಯ ರಾಜಕೀಯದಲ್ಲಿ ಆಗಾಗ ಹಸ್ತಕ್ಷೇಪ ಮಾಡುತ್ತಲೇ ಬಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯದ ಮಂಚೂಣಿಗೆ ಬರುವುದೇ ಇಲ್ಲ. ಈ ತೆರೆಮರೆಯ ಶಕ್ತಿಗಳನ್ನು ಅಲ್ಲಿಯ ರಾಜಮನೆತನದವರೆಂದೋ ಅಥವಾ ಥಾಯ್ ಸೇನೆ ಎಂದೋ ಅಂದುಕೊಂಡರೆ ತಪ್ಪಾಗಲಾರದು. ಸಂವಿಧಾನಾತ್ಮಕ ರಾಜಾಧಿಕಾರ ಇದ್ದರೂ ಚಕ್ರಾಧಿಪತ್ಯ ವ್ಯವಸ್ಥೆಯ ಕೆಲವು ಪಳೆಯುಳಿಕೆಗಳನ್ನು ಸಂವಿಧಾನಾತ್ಮಕವಾಗಿಯೇ ಇನ್ನೂ ಉಳಿಸಿಕೊಂಡು ಬಂದಿರುವುದರಿಂದ ಆಡಳಿತ ಯಂತ್ರದ ಹಲವು ಸ್ತರಗಳಲ್ಲಿ ಇದರ ಪ್ರಭಾವ ಕಾಣಬಹುದು.
ಥಾಯ್ ಸಂವಿಧಾನದ ಪ್ರಕಾರ ಸೇನೆ ಮಹಾರಾಜರ ಅಧೀನದಲ್ಲಿದ್ದು, ರಾಜಕಾರಣ ಯಾವಾಗ ರಾಜವಂಶದ ಹಿತಾಸಕ್ತಿಗಳ ವಿರುದ್ಧ ತಿರುಗುತ್ತದೆಯೋ ಆಗೆಲ್ಲ ಮಿಲಿಟರಿ ಪ್ರತ್ಯಕ್ಷವಾಗಿ ಅಧಿಕಾರದಲ್ಲಿರುವ ಸರ್ಕಾರ ಪದಚ್ಯುತಗೊಳ್ಳುವಂತೆ ನೋಡಿಕೊಳ್ಳುತ್ತಿತ್ತು. ಆಮೇಲೆ ಸ್ವಲ್ಪ ಕಾಲ ಮಿಲಿಟರಿ ಆಡಳಿತ. ಮತ್ತೆ ಚುನಾವಣೆ. ಹೀಗೇ ನಡೆದು, ಹೊಸದಾಗಿ ಬಂದ ನಾಯಕರು ಮತ್ತು ತೆರೆಮರೆಯ ಶಕ್ತಿಗಳ ಹೊಂದಾಣಿಕೆಯಿಂದ ಎಂಬತ್ತರ ದಶಕಗಳವರೆಗೆ ಥಾಯ್ ರಾಜಕಾರಣ ಪ್ರಜಾಪ್ರಭುತ್ವ ಎನ್ನಿಸಿಕೊಂಡು ಬಂದಿತ್ತು.
ಕೆಲವೊಮ್ಮೆ ಈ ವ್ಯವಸ್ಥೆಯಲ್ಲೂ ಸ್ವಲ್ಪ ಬದಲಾವಣೆಗಳು ಇರುತ್ತಿದ್ದವು. ಮಿಲಿಟರಿ ದೇಶದ ರಾಜಕಾರಣದಲ್ಲಿ ವಿಪರೀತ ಮೂಗು ತೂರಿಸಿ ಪ್ರಬಲವಾಗುತ್ತಿದ್ದಂತೆ, ರಾಜಕೀಯದಲ್ಲಿರುವ ಪ್ರಗತಿಪರರನ್ನು ಬಳಸಿಕೊಂಡು ಸೇನೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಷ್ಟು ಶಕ್ತಿಶಾಲಿಯಾಗಿದ್ದರು ಥಾಯ್ ರಾಜ ಭೂಮಿಬ್ಹೋಲ್ ಅದುಲ್ಯದೇಜ್. ಇಂತಹ ಪ್ರಯೋಗಗಳನ್ನು ಕೆಲವು ಸಲ ಅವರು ಮಾಡಿದ್ದುಂಟು. ಅದಕ್ಕೆ ಪ್ರಜಾಪ್ರಭುತ್ವವಾದಿ ಶಕ್ತಿಗಳ ಬೆಂಬಲವೂ ಇತ್ತು.
ಆದರೆ ಈಗ ತಿಂಗಳುಗಟ್ಟಲೆ ಧರಣಿ, ಮುಷ್ಕರ ನಡೆದಿದ್ದರೂ, ಸೇನೆ ಸುಮ್ಮನೆ ಕೈಕಟ್ಟಿಕೊಂಡು, ‘ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ’ ಎಂಬಂತೆ ತಟಸ್ಥವಾಗಿದೆ. ಇದಕ್ಕೆ ಕಾರಣ ಈ ತೆರೆಮರೆಯ ಹಿತಾಸಕ್ತಿಗಳಲ್ಲಿಯೇ ಒಗ್ಗಟ್ಟು ಇಲ್ಲದಿರುವುದು. ದೇಶದ ರಾಜಕೀಯದಲ್ಲಿ ಮೂಡಿರುವ ಹೊಸ ಬೆಳವಣಿಗೆಗಳಿಗೆ ಸ್ಪಂದಿಸುವುದು ಹೇಗೆ ಎಂಬ ಗೊಂದಲ ಮತ್ತು ಸ್ಪಂದಿಸಿದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಆತಂಕವೂ ಇದಕ್ಕೆ ಕಾರಣವಿರಬಹುದೇನೋ.
ಥಾಯ್ ರಾಜಕಾರಣದಲ್ಲಿ ಇಂತಹ ಅಭದ್ರತೆ ಕಾಡಲು ಮೂರು ಬೆಳವಣಿಗೆಗಳು ಕಾರಣವಾಗಿವೆ. ಮೊದಲನೆಯದಾಗಿ ಅಧಿಕಾರದ ಕೇಂದ್ರಬಿಂದುವಾಗಿದ್ದ 86 ವರ್ಷದ ಮಹಾರಾಜರಿಗೆ ಆರೋಗ್ಯ ಚೆನ್ನಾಗಿಲ್ಲದೆ ಅವರ ನಂತರ ಯಾರು ಎನ್ನುವ ಪ್ರಶ್ನೆ ಎದುರಾಗಿರುವುದು. ಎರಡನೆಯದು, ಯುವ ಪೀಳಿಗೆಗೆ ಮತ್ತು ದೇಶದ ಬುದ್ಧಿಜೀವಿಗಳಿಗೆ, ರಾಜಕಾರಣದಲ್ಲಿ ಮಹಾರಾಜರ ಪ್ರಭಾವ ಅತಿಯಾಗಿ ಪ್ರಜಾಪ್ರಭುತ್ವದ ಬೆಳವಣಿಗೆಗೆ ಮುಳುವಾಗಿದೆ ಅಂತ ಅನ್ನಿಸುತ್ತಿರುವುದು. ಮೂರನೆಯದು, ಥಾಯ್ ರಾಜಕಾರಣದಲ್ಲಿ ಹೊಸ ಶಕ್ತಿಕೇಂದ್ರಗಳು ಹುಟ್ಟಿಕೊಂಡಿದ್ದು, ಅವು ತಮಗೆ ಬೇಕಾದ ಹಾಗೆ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗಿರುವುದು.
ಥಾಯ್ ರಾಜಮನೆತನದ ಆಸ್ತಿ ಮತ್ತು ಹಣಕಾಸಿನ ಉಸ್ತುವಾರಿಯನ್ನು ನೋಡಿಕೊಳ್ಳುವ ‘ಕ್ರೌನ್ ಪ್ರಾಪರ್ಟಿ ಬ್ಯೂರೊ’, ಗ್ರಾಮೀಣಾಭಿವೃದ್ಧಿ ಯೋಜನೆಗಳಲ್ಲಿ, ನೀರಾವರಿ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಾ ಬಂದಿದ್ದು ರಾಜ ಭೂಮಿಬ್ಹೋಲ್ ಈ ಮೂಲಕ ಸಮಾಜದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸಗಳಿಗೆ ಪ್ರೋತ್ಸಾಹ ಕೊಟ್ಟಿರುವುದರಿಂದ ಗ್ರಾಮೀಣ ಜನತೆಯ ಪ್ರೀತ್ಯಾದರಗಳನ್ನು ಉಳಿಸಿಕೊಳ್ಳುವುದರಲ್ಲಿ ರಾಜರು ಯಶಸ್ವಿಯಾಗಿದ್ದಾರೆ. ಆದರೆ ರಾಜಮನೆತನದ ಎಲ್ಲ ಸದಸ್ಯರೂ ಆ ಗೌರವಗಳನ್ನು ಉಳಿಸಿಕೊಂಡಿಲ್ಲ.
ರಾಣಿ ಸಿರಿಕಿತ್ ಮತ್ತು ಯುವರಾಜ ವಜಿರಲಂಗಕೋರ್ನ್ ಅವರನ್ನು ಕಂಡರೆ ಥಾಯ್ ಜನರಿಗೆ ಅಷ್ಟಕ್ಕಷ್ಟೇ. ಯುವರಾಜರ ಸಾಂಸಾರಿಕ ಜೀವನದ ಬಗ್ಗೆ, ದುಶ್ಚಟಗಳ ಬಗ್ಗೆ ಗುಸುಗುಸು ಇದ್ದು ಅವು ಯಾವುದೂ ಸಾರ್ವಜನಿಕ ಮಟ್ಟದಲ್ಲಿ ಚರ್ಚೆಗೆ ಬರುವಂತಿಲ್ಲ. ಯುವರಾಜರು ಆಸ್ಟ್ರೇಲಿಯಾ, ಅಮೆರಿಕದ ಸೇನೆಗಳಲ್ಲಿ ತರಬೇತಿ ಹೊಂದಿದವರು.
1970ರ ದಶಕದಲ್ಲಿ ಸೇನೆಯನ್ನು ಬಳಸಿಕೊಂಡು ಅಮೆರಿಕನ್ ಗೂಢಚಾರ ಇಲಾಖೆಯ ನೆರವಿನೊಡನೆ ಥಾಯ್ ಎಡಪಂಥೀಯರನ್ನು ನಿರ್ನಾಮ ಮಾಡಲು ಕಾರಣರಾಗಿದ್ದರಂತೆ. ‘ಲೆಸ್ ಮೆಜೆಸ್ತೆ’ ಕಾನೂನು ಇರುವುದರಿಂದ ಇದ್ಯಾವುದನ್ನೂ ಚರ್ಚೆ ಮಾಡಲು ಜನರು ಹೆದರುತ್ತಾರೆ. ರಾಜರ ಬಗ್ಗೆ ಮತ್ತು ರಾಜಮನೆತನದ ಬಗ್ಗೆ ಯಾರಾದರೂ ಚಕಾರ ಎತ್ತಿದರೆ ಈ ಕಾನೂನಿನ ಅನ್ವಯ ಐದರಿಂದ ಹದಿನೈದು ವರ್ಷದವರೆಗೆ ಸೆರೆಮನೆ ವಾಸ ಖಂಡಿತ. ಅಷ್ಟೇ ಅಲ್ಲ, ವಿದೇಶದ ವರದಿಗಾರರು ಇಂತಹ ಸುದ್ದಿಗಳನ್ನು ಬರೆದರೆ ಅವರನ್ನು ದೇಶದಿಂದ ಗಡಿಪಾರು ಮಾಡಿ ಅಂತಹ ಸುದ್ದಿಗಳಿರುವ ಪತ್ರಿಕೆಗಳನ್ನು ದೇಶದೊಳಗೆ ನುಸುಳಲೂ ಬಿಡುವುದಿಲ್ಲ.
ಪರಿಸ್ಥಿತಿ ಇಷ್ಟು ಹದಗೆಡಲು ಕಾರಣ ತಕ್ಸಿನ್ ಶಿನವಾತ್ರ ಎಂಬ ಉದ್ಯಮಿ ಪ್ರಧಾನಿಯಾಗಿ ಬಂದ ಮೇಲಿನ ಥಾಯ್ ರಾಜಕಾರಣ. ಇವರು 1998 ರಲ್ಲಿ ‘ಥಾಯ್ ರಕ್ ಥಾಯ್’ ಎಂಬ ಪಕ್ಷವನ್ನು ಹುಟ್ಟುಹಾಕಿ ಆ ಮೂಲಕ ಚುನಾವಣೆಗೆ ನಿಂತು ಗೆದ್ದು 2001 ರಲ್ಲಿ ಪ್ರಧಾನಿಯಾದರು. ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ಅದರ ಒಳಹೊರಗು ಬಲ್ಲವರು. ಶಿನವಾತ್ರ ಮನೆತನದವರು ಉದ್ಯಮಿಗಳೆಂದು ಗುರುತಿಸಿಕೊಂಡಿದ್ದರೂ ದೇಶದ ಆತಿ ದೊಡ್ಡ ಉದ್ಯಮಿಯಾಗಿ ಹೊರಹೊಮ್ಮಲು, ರಾಜಕಾರಣದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಧಿಕಾರವನ್ನು ಬಳಸಿಕೊಂಡು, ಸರ್ಕಾರಿ ಕಾಂಟ್ರಾಕ್ಟ್ಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗಿರುವುದೇ ಕಾರಣ.
ಮೊಬೈಲ್ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಥಾಯ್ಲೆಂಡ್ನಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ನಲ್ಲೂ ಉದ್ಯಮಗಳನ್ನು ಹೊಂದಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡ ಕೂಡಾ ಇವರ ಒಡೆತನದಲ್ಲಿದೆ. ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ ಮತ್ತು ಥಾಯ್ ರಾಜರಿಗೆ ಅವಮಾನವಾಗುವಂತೆ ನಡೆದುಕೊಂಡರು ಎನ್ನುವುದು ಅವರ ಮೇಲೆ ಇರುವ ಆರೋಪ. ಮಾದಕ ವಸ್ತುಗಳ ವ್ಯಾಪಾರಸ್ಥರನ್ನು ನಿಯಂತ್ರಿಸಲು ಹೋಗಿ ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ ಕೊಂದಿದ್ದು, ಅದರಲ್ಲಿ ಸುಮಾರು ಜನ ಮಾದಕ ದ್ರವ್ಯಗಳ ವ್ಯಾಪಾರಸ್ಥರೇ ಅಲ್ಲ ಎಂದು ಸಾಬೀತಾಯಿತು. ಥಾಯ್– ಮಲೇಷ್ಯಾ ಗಡಿ ಪ್ರದೇಶಗಳಲ್ಲಿ ಮುಸ್ಲಿಮರನ್ನು ಉಗ್ರವಾದಿಗಳು ಎಂದು ಕರೆದು ನೂರಾರು ಜನರನ್ನು ಹಿಂಸಿಸಿದರೆಂಬ ಆಪಾದನೆಯೂ ತಕ್ಸಿನ್ ಮೇಲಿದೆ.
ಮಹಾರಾಜರ ಜನಪ್ರಿಯತೆಗೆ ಕಾರಣವಾದ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಇವರೂ ಮಾಡಿ ಗ್ರಾಮೀಣ ಪ್ರದೇಶದವರಿಗೆ ಪ್ರಿಯರಾದರು. ಉದಾಹರಣೆಗೆ ಒಂದು ಗ್ರಾಮ ಒಂದು ಉತ್ಪನ್ನ (OTOP-– One Tambon One Product) ಎಂಬ ಯೋಜನೆಯಡಿ ಒಂದೊಂದು ಗ್ರಾಮದಲ್ಲೂ ಯಾವ ವಿಶೇಷವಾದ ಉತ್ಪನ್ನಗಳಿವೆ ಎಂದು ಕಂಡುಕೊಂಡು ಅವಕ್ಕೆ ಉತ್ತೇಜನ ನೀಡಿ, ಅದರಲ್ಲೂ ಹೆಂಗಸರು ತೊಡಗಿಸಿಕೊಳ್ಳುವುದಕ್ಕೆ ಸಹಾಯಧನ ಕೊಟ್ಟಿದ್ದಾರೆ. ಇದರಿಂದ ಪ್ರಯೋಜನ ಪಡೆದವರೂ ಸಾವಿರಾರು ಮಂದಿ. ಚುನಾಯಿತ ಸರ್ಕಾರ ಇಂತಹ ಕೆಲಸಗಳನ್ನು ಮಾಡುವುದು ಸರಿ. ಆದರೆ ಹಣವಂತ ಉದ್ಯಮಿಗಳು ರಾಜಕಾರಣದಲ್ಲಿ ತೊಡಗಿಸಿಕೊಂಡರೆ ವ್ಯವಸ್ಥೆಯನ್ನು ಹೇಗೆ ಬುಡಮೇಲು ಮಾಡಿ ಯಾರಿಗೆ ಬೇಕೋ ಅವರಿಗೆ ಮಾತ್ರ ನೆರವು ಒದಗಿಸಿ ತಮಗೆ ವೋಟು ಹಾಕದವರಿಗೆ ಯಾವ ಸೌಕರ್ಯವೂ ಒದಗಿಸದೆಯೇ ರಾಜಕಾರಣ ಮಾಡಬಹುದು. ವ್ಯವಸ್ಥೆಯನ್ನು ಒಳಗೊಳಗೇ ತಮಗೆ ಬೇಕಾದ ಹಾಗೆ ಬಳಸಿಕೊಂಡು ರಾಜಕಾರಣ ಮಾಡಿ ಪದೇ ಪದೇ ಚುನಾವಣೆಗಳಲ್ಲಿ ಗೆಲ್ಲಲೂಬಹುದು.
ಅಧಿಕಾರದ ದುರುಪಯೋಗ, ವೈರಿಗಳ ಮೇಲೆ ಸೇಡಿನ ರಾಜಕಾರಣ ಮಾಡಿ ಪ್ರಗತಿಪರ, ನಗರವಾಸಿ ಬುದ್ಧಿಜೀವಿಗಳ, ಪ್ರಜಾಪ್ರಭುತ್ವವಾದಿಗಳ ವಿರೋಧ ಕಟ್ಟಿಕೊಂಡರು. ಈ ಕಾರಣದಿಂದಲೇ ಅವರನ್ನು 2006ರಲ್ಲಿ ಥಾಯ್ಲೆಂಡ್ನ ಸಂವಿಧಾನ, ನ್ಯಾಯಾಲಯದ ತೀರ್ಪಿನ ಪ್ರಕಾರ ಪದಚ್ಯುತಗೊಳಿಸಲಾಯಿತು. 2006 ರಿಂದ 2008ರ ಒಳಗೆ ಸಂವಿಧಾನದಲ್ಲಿ ಸುಧಾರಣೆಗಳನ್ನು ತಂದರೂ ವಿರುದ್ಧ ದಿಕ್ಕುಗಳಲ್ಲಿ ಹೋಗುತ್ತಿರುವ ಥಾಯ್ ರಾಜಕಾರಣದಲ್ಲಿ ಒಮ್ಮತ ಮೂಡುತ್ತಿಲ್ಲ. ಉದಾಹರಣೆಗೆ 2008 ರಲ್ಲಿಯೇ ಮೂರು ಪ್ರಧಾನಿಗಳು ಬಂದು ಹೋಗಿದ್ದಾಯಿತು. 2010ರಲ್ಲಿ ಮೂರು ತಿಂಗಳ ಮಟ್ಟಿಗೆ ಒಂದು ಸರ್ಕಾರ ಬಂದು ಹೋಯಿತು.
2011ರಲ್ಲಿ ನಡೆದ ಚುನಾವಣೆಯಲ್ಲಿ ತಕ್ಸಿನ್ ಶಿನವಾತ್ರರ ತಂಗಿ 46 ವರ್ಷದ ಉದ್ಯಮಿ ಯಿಂಗ್ಲಕ್ ಶಿನವಾತ್ರ ಚುನಾಯಿತರಾಗಿ ಪ್ರಧಾನಿಯಾದರು. ಆದರೆ ಇದೀಗ ರಾಜಕೀಯ ವಿರೋಧಿಗಳು ತಕ್ಸಿನ್ ಶಿನವಾತ್ರ ತಂಗಿಯ ಮೂಲಕ ರಾಜಕಾರಣದಲ್ಲಿ ಮೂಗು ತೂರಿಸುತ್ತಿದ್ದಾರೆ. ಆದ್ದರಿಂದ ದೇಶಭ್ರಷ್ಟರಾಗಿ ಇಂಗ್ಲೆಂಡ್ ನಲ್ಲಿ ಸ್ವಇಚ್ಛೆಯಿಂದ ನೆಲೆ ನಿಂತಿರುವ ತಕ್ಸಿನ್ಗೆ ಯಾವ ಕಾರಣಕ್ಕೂ ಕ್ಷಮೆ ಇರಬಾರದು ಮತ್ತು ಅವರನ್ನು ದೇಶಕ್ಕೆ ಮರಳಿ ಬಾರದಂತೆ ತಡೆಯಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ
ಯಿಂಗ್ಲಕ್ ಶಿನವಾತ್ರ ಸರ್ಕಾರ ಬಂದ ಮೇಲೆ ರೈತರನ್ನು ಮೆಚ್ಚಿಸಲು ಹೋಗಿ ಅಕ್ಕಿಗೆ ಇದ್ದ ಬೆಂಬಲ ಬೆಲೆಯನ್ನು ದುಪ್ಪಟ್ಟು ಮಾಡಿದ ಕಾರಣ, ನೆರೆ ದೇಶಗಳಿಂದ ಕಳಪೆ ಅಕ್ಕಿ ಕಳ್ಳಸಾಗಣೆ ಮೂಲಕ ದೇಶಕ್ಕೆ ಬರುತ್ತಿದೆ. ಅಲ್ಲದೆ ಚೀನಾ ಒಪ್ಪಂದ ಮಾಡಿಕೊಂಡ ಹಾಗೆ ಅಕ್ಕಿಯನ್ನು ಕೊಂಡುಕೊಳ್ಳದಿರುವುದರಿಂದ ಗೋದಾಮಿನಲ್ಲಿ ಲಕ್ಷಾಂತರ ಟನ್ನು ಅಕ್ಕಿ ಕೊಳೆಯುತ್ತಾ ಇದೆ.
ಹೊಸ ಫಸಲನ್ನು ರೈತರಿಂದ ಕೊಂಡುಕೊಳ್ಳಲಾಗದೆ, ಹಳೆಯದನ್ನು ಮಾರಲಾಗದೆ, ರೈತರಿಂದ ಕೊಂಡುಕೊಂಡ ಫಸಲಿಗೆ ಹಣ ಪಾವತಿ ಮಾಡದೆ ಈಗ ರೈತರೂ ಸರ್ಕಾರದ ಎದುರು ತಿರುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಕೋಟಿಗಟ್ಟಲೆ ಹಣ ಈ ಅಕ್ಕಿ ಸಬ್ಸಿಡಿಗೆ ಖರ್ಚಾಗಿದ್ದು ಅದಕ್ಕೆ ನಗರವಾಸಿಗಳಿಂದ ವಿರೋಧ ವ್ಯಕ್ತವಾಗಿದೆ. ಪ್ರತಿಭಟನಾಕಾರರು ಬಹುತೇಕ ನಗರವಾಸಿಗಳೇ ಆದ್ದರಿಂದ ಗ್ರಾಮೀಣ ಜನತೆಗೆ, ಬಡಬಗ್ಗರಿಗೆ, ಕೃಷಿ ಕ್ಷೇತ್ರಕ್ಕೆ ಸಹಾಯಧನ ಇತ್ಯಾದಿ ಕೊಟ್ಟರೆ ನಗರವಾಸಿಗಳು ಸಹಿಸಲಾರರೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಥಾಯ್ ರಾಜಕಾರಣದ ಕೆಲವೊಂದು ಸಮಸ್ಯೆಗಳು ನಮ್ಮಲ್ಲೂ ಕಾಣತೊಡಗಿವೆ. ನಮ್ಮ ರಾಜಕಾರಣದಲ್ಲೂ ಹಣವಂತ ಉದ್ಯಮಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಇದೆ. ಅಲ್ಲದೇ ಯಾವ ವಿಷಯದಲ್ಲೂ ಒಮ್ಮತ ಮೂಡದೆ ಸಂಸತ್ತಿನಲ್ಲಿ ಕಲಾಪಗಳು ನಡೆಯದಂತೆ ಅಡ್ಡಿಯುಂಟು ಮಾಡುವುದನ್ನು ದಿನಾ ನೋಡುತ್ತೇವೆ. ಸೇನೆಯಲ್ಲಿರುವವರು ಏಕೆ ರಾಜಕಾರಣದಲ್ಲಿ ತೊಡಗಬಾರದು ಎಂದು ಹೇಳುವ ನಿವೃತ್ತ ಸೇನಾಧಿಕಾರಿಗಳ ಸಂಖ್ಯೆಯೂ ಜಾಸ್ತಿ ಆಗುತ್ತಿದೆ.
ರಾಜಕಾರಣದಲ್ಲಿದ್ದು, ಚುನಾವಣೆಗೆ ನಿಂತು ಗೆದ್ದರೂ ವ್ಯವಸ್ಥೆಯ ಬದಲಾವಣೆ ಬೇಕು ಅನ್ನುತ್ತಾ ಧರಣಿ ಕೂರುತ್ತಾರೆ ಅರವಿಂದ ಕೇಜ್ರಿವಾಲರು. ವ್ಯವಸ್ಥೆಯ ಕೊಳೆ ತೊಳೆಯಲು ಬದಲಾವಣೆ ಬೇಕು. ಆದರೆ ರಾಜಕೀಯ ಪಕ್ಷಗಳ ನಡುವೆ ಯಾವ ವಿಷಯದಲ್ಲಿಯೂ ಒಮ್ಮತ ಮೂಡದಿದ್ದರೆ ಏನಾಗಬಹುದು ಎಂಬುದನ್ನು ಥಾಯ್ ರಾಜಕಾರಣ ಸಾಗುತ್ತಿರುವ ದಾರಿ ನೋಡಿ ನಾವು ಎಚ್ಚೆತ್ತುಕೊಳ್ಳಬೇಕಾಗುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.