ಹನುಮಂತನ ಎದೆಯಲ್ಲಿ ರಾಮ ಇದ್ದ ಹಾಗೆ ನನ್ನ ಎದೆ ಬಗೆದು ನೋಡಿ, ಅಲ್ಲಿ ಸಿದ್ದರಾಮಯ್ಯ ಇರುತ್ತಾರೆ ಎಂದು ಸಚಿವರೊಬ್ಬರು ಹೇಳಿದ ಮರುದಿನವೇ ಸಂಪಾದಕರ ಬಳಿ ಹಾಜರಾದ ಪತ್ರಕರ್ತ ತೆಪರೇಸಿ.
‘ಸರ್ ನನಗೊಂದು ವಿಚಿತ್ರ ಶಕ್ತಿ ಸಿದ್ಧಿಸಿದೆ. ಎರಡು ನಿಮಿಷ ಯಾರ ಎದೆಯನ್ನು ದಿಟ್ಟಿಸಿ ನೋಡುತ್ತೇನೋ ಅವರ ಎದೆಯ ಒಳಗೆ ಯಾರಿದ್ದಾರೆ ಎಂಬುದು ಗೊತ್ತಾಗಿಬಿಡುತ್ತದೆ’ ಎಂದ!
ಸಂಪಾದಕರಿಗೆ ಗಾಬರಿಯಾಯಿತು. ನಿನ್ನೆಯಿನ್ನೂ ಚೆನ್ನಾಗಿದ್ದ, ಇವತ್ತೇನಾಯಿತು... ಎಂದು ಮನಸ್ಸಿನಲ್ಲೇ ಅಂದುಕೊಂಡು ‘ಏನಯ್ಯ ಅದು ಅಂಥ ವಿಚಿತ್ರ ಶಕ್ತಿ’ ಎಂದರು.
‘ಬಾಬಾ ಒಬ್ಬರು ಅಂಥ ಶಕ್ತಿಯನ್ನು ನನಗೆ ಕೊಟ್ಟಿದ್ದಾರೆ. ನೆನ್ನೆ ನಾನು ಕೆಲವರ ಎದೆ ದಿಟ್ಟಿಸಿ ಪರೀಕ್ಷಿಸಿದೆ. ಸತ್ಯ ಅಂತ ಗೊತ್ತಾಯ್ತು...’ ತೆಪರೇಸಿ ವಿವರಿಸಿದ.
ಸಂಪಾದಕರು ತಲೆ ಕೆರೆದುಕೊಂಡರು. ‘ಆಯ್ತು ಒಂದು ಕೆಲ್ಸ ಮಾಡು. ಕಾಂಗ್ರೆಸ್, ಅತೃಪ್ತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರ ಎದೆಗಳಲ್ಲಿ ಯಾರ್ಯಾರಿದ್ದಾರೆ ಹೋಗಿ ನೋಡ್ಕೊಂಡು ಬಾ’ ಎಂದರು.
ತೆಪರೇಸಿ ಫಟ್ ಅಂತ ಮಾಯವಾಗಿ ಸಂಜೆ ಕಚೇರಿಗೆ ಹಾಜರಾದ. ಸಂಪಾದಕರು ಅವನನ್ನು ದಿಟ್ಟಿಸಿ ಕೇಳಿದರು ‘ಏನಯ್ಯ ಕಾಂಗ್ರೆಸ್ ಶಾಸಕರ ಎದೆಯಲ್ಲಿ ಯಾರಿದ್ರು? ಸಿದ್ದರಾಮಯ್ಯ ಕಂಡ್ರಾ?’