ಪಕ್ಕದ ಮನೆ ವೈದ್ಯನಾಥನ್ಅಂಕಲ್ಟಿ.ವಿ.ಯ ಹಿಂದಿ ಚಾನೆಲ್ಲೊಂದರಲ್ಲಿ ಕಿವಿ,ಕಣ್ಣುನೆಟ್ಟು ಅತ್ತಿತ್ತ ಹಂದಾಡದೇ ನಮೋನಮಃ ಭಂಗಿಯಲ್ಲಿ ಕೂತಿದ್ದರು. ಏನಿಷ್ಟೊಂದು ಭಕ್ತಿಯಿಂದ ನೋಡ್ತಿದ್ದಾರೆ ಎಂದುಕೊಂಡು ಇಣುಕಿದೆ. ಗೆದ್ದೇ ಗೆಲ್ಲುತ್ತೇವೆ ಎಂದು ಬೀಗಿದ್ದ ಘಟಾನುಘಟಿಗಳನ್ನು ತರಗೆಲೆಯಂತೆ ತೂರಿಹಾಕಿದ ನಮೋಅಲೆಯ ಕರ್ತಾರ ವಿಜಯೀ ಭಾಷಣಗೈಯುತ್ತಿದ್ದರು.
ಹಿಂದಿ ಮಾತ್ರವಲ್ಲ, ಇಷ್ಟು ವರ್ಷ ಬೆಂಗಳೂರಿನಲ್ಲಿದ್ದೂ ಹೆಚ್ಚಿನ ಕನ್ನಡವನ್ನೂ ಕಲಿಯದ ಈ ತಮಿಳಿಗ ಅಂಕಲ್, ಯಾವಾಗಿನಿಂದ ಹಿಂದಿ ಕಲಿತರಪ್ಪ ಎಂದು ಪರಮ ಅಚ್ಚರಿ ನನಗೆ. ‘ಹಿಂದಿ ಬರಲ್ಲ, ಆದರೆ ನಮ್ಮ ಮೋದಿ ಹಾವಭಾವ, ಮುಖಭಾವದಲ್ಲೇ ಎಲ್ಲ ಗೊತ್ತಾಗುತ್ತಮ್ಮ’ ಎಂದರು ಅಂಕಲ್. ‘ಈ ಸಲನಾದ್ರೂ ಕಪ್ಪುಹಣ ವಾಪಸು ತಂದು 15 ಲಕ್ಷ ಎಲ್ಲರ ಅಕೌಂಟಿಗೆ ಹಾಕೋ ಬಗ್ಗೆ ಏನಾದ್ರೂ ಹೇಳಿದ್ರಾ ಅಂಕಲ್... ಅಚ್ಛೇ ದಿನ್ ಬರುತ್ತಂತಾ?’
‘ಮತದಾರರು ಅದೆಲ್ಲ ಬೇಕು ಅಂತ ಎಲ್ಲಿ ಕೇಳಿದ್ರು? ಕಾಂಗ್ರೆಸ್ ಕಳೆನಾಶಕ ಸ್ಪ್ರೇ ಮಾಡ್ತೀನಿ ಅಂತ ಮೋದಿ ಮಾತು ಕೊಟ್ಟಿದ್ರು... ಬುಡಸಮೇತ ಕಿತ್ತುಹಾಕಿದ್ರು. ಅಮೇಠಿಯಂಥ ಕೈಕೋಟೆಯಲ್ಲೇ ಕಮಲ ಅರಳಿಸಿದ್ರು. ತುಮಕೂರು, ಮಂಡ್ಯದಲ್ಲೂ ನಿಂಬೆಹಣ್ಣು ವ್ಯಾಪಾರ ತಳ ಕಚ್ಚಿದೆಯಂತೆ’ ಅಂಕಲ್ ನಕ್ಕರು.
‘ಹಂಗಾರೆ ಇಲ್ಲಿ ಕುದುರೆ ವ್ಯಾಪಾರ ಶುರು ಮಾಡ್ತಾರಂತಾ’ ಕೇಳಿದೆ.
‘ತಪ್ಪೇನು... ರಾಜ್ಯ, ರಾಷ್ಟ್ರ ಎಲ್ಲ ಚೌಕೀದಾರರ ಹತ್ರನೇ ಸುಭದ್ರವಾಗಿರುತ್ತಮ್ಮ. ಅದ್ಸರಿ, ಹಾಸನದ ದೊಡ್ಡೇಗೌಡರು ಧೃತರಾಷ್ಟ್ರನೋ, ಯಯಾತಿಯೋ’ ಯಕ್ಷಪ್ರಶ್ನೆ ಮುಂದಿಟ್ಟರು. ಮಾತನಾಡುತ್ತಲೇ ನನ್ನ ಕೈಲ್ಲಿದ್ದ ಪೇಪರನ್ನು ಇಸಿದುಕೊಂಡು ಪುಟಗಳನ್ನು ತಿರುವಿ ಹಾಕಿದರು.
ಪರವಾಯಿಲ್ಲ, ನಿಮ್ಮ ಕನ್ನಡದ ಪೇಪರುಗಳೂ ಆಲ್ರೌಂಡ್ನ್ಯೂಸ್ಕವರ್ ಮಾಡುತ್ತವಲ್ಲಮ್ಮ... ಎಂಥಾ ಸ್ಪಿರುಚ್ಯುವಲ್ ಫೋಟೊ ಹಾಕಿದಾರೆ...’ ಎಂದು ಖುಷಿಯಿಂದ ಪುಟವೊಂದನ್ನು ಮುಖಕ್ಕೆ ಹಿಡಿದರು. ನೋಡಿದರೆ, ಬನಶಂಕರಿಯ ನವ ಯುವ ಸಂಸದರು ಟಾಪ್ಲೆಸ್ದಿರಿಸಿನಲ್ಲಿ ಸಂಧ್ಯಾವಂದನೆಮಾಡುತ್ತಿದ್ದ ಫೋಟೊ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.