‘ಶಾಶ್ವತ ಶತ್ರು ನಾಶ ಹೋಮ, ಪುತ್ರ-ಪೌತ್ರ ಅಧಿಕಾರ ಪ್ರಾಪ್ತಿ ಹೋಮ, ಸಂಪುಟ ಸಂಕಟ ನಿವಾರಣಾ ಯಾಗ, ಡಿಸಿಎಂ ಡಿಶುಂ ಪರಿಹಾರ ಯಾಗ, ‘ಸಂತೋಷ’ ಹಸ್ತಕ್ಷೇಪ ತಡೆ ಶಾಂತಿ ಯಾಗ, ಸಂಪೂರ್ಣ ಹೈಕಮಾಂಡ್ ಅನುಗ್ರಹ ಪ್ರಾಪ್ತಿ ಹೋಮ... ಇತ್ಯಾದಿ’. ಇಲ್ಲಿ ಸುದ್ದಿಗಿಂತ ಹೊಗೆ ಜಾಸ್ತಿ ಎಂದುಕೊಂಡ ತೆಪರೇಸಿ ಸೀದಾ ದೊಡ್ಡಗೌಡ್ರ ದೊಡ್ಡಮಗ ಅವರ ಮನೆ ಕಡೆ ಹೊರಟ. ಅಲ್ಲಿ ಅವರ ಮನೆ ಮುಂದೆ ಒಬ್ಬ ‘ತೆನೆಶಾಸ್ತ್ರ’ ಅಂತ ಬೋರ್ಡ್ ಇಟ್ಟುಕೊಂಡು ಕೂತಿದ್ದು ಕಂಡು ಕುತೂಹಲಗೊಂಡು ‘ಅಲ್ಲರೀ, ನಾನು ಈ ಗಿಳಿಶಾಸ್ತ್ರ, ಕವಡೆಶಾಸ್ತ್ರ, ಸಂಖ್ಯಾಶಾಸ್ತ್ರ ಕೇಳಿದ್ದೆ. ಇದ್ಯಾವುದು ತೆನೆಶಾಸ್ತ್ರ?’ ಎಂದ.