‘ಇದು ಕಾಲುಜ್ಞಾನ ಮಾತ್ರವಲ್ಲ, ಚಾಲುಜ್ಞಾನವೂ ಹೌದು ಕನ್ರೋ. ಪಕ್ಷಾಂತರಿಗಳು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಅನ್ನೋ ಚಾಲುಗಲಿತವ್ರೆ’ ಅಂತು ಯಂಟಪ್ಪಣ್ಣ.
‘ಹೌದು ಕನಣೈ, ವ್ಯವಸ್ಥೆ ಜಡ್ಡು ಹಿಡಿದು ಹೋಗ್ಯದೆ. ಮೂರು ಸಾರಿ ಶಾಸಕರಾಗಿ ಗೆದ್ದೋರು, ಅವರ ಸಂತಾನ ಮತ್ತೆ ಎಲೆಕ್ಷನ್ನಿಗೆ ನಿಲ್ಲಂಗುಲ್ಲ, ನಿಗಮ-ಮಂಡಲಿಗಳಲ್ಲಿ ಕಾರ್ಯಕರ್ತರಿಗೆ ಮಾತ್ರ ಅಂತ ಕಾನೂನು ಮಾಡಬಕು’ ಚಂದ್ರು ಸಿಟ್ಟಾದ.
‘ಅಧಿಕಾರದಲ್ಲಿರೋರ ಸ್ವಂತ ಅಭಿವೃದ್ಧಿ ಬುಟ್ರೆ ಬೇರೆ ಏನೂ ನಡೀತಿಲ್ಲ. ಎಲ್ಲ ಪಕ್ಷಗಳೂ ಅಧಿಕಾರ ತಕ್ಕಂಡೇ ತಕ್ಕಬೇಕು ಅಂತ ಜನಕ್ಕೆ ಮಂಕುಬೂದಿ ಎರಚಲು ಕಾದು ನಿಂತವೆ. ಈ ಹುನ್ನಾರ ಅರೀದ ಜನ ಪುಗಸಟ್ಟೆ ಸಿಕ್ಕೋ ಫಾಯ್ದೆಗಳ ಬೆಲ್ಲದನ್ನದ ಖುಷಿ ಅನುಭವಿಸೋದ್ರಲ್ಲೇ ಬಿಜಿಯಾಗವ್ರೆ’ ಅಂತ ವಿವರಣೆ ಕೊಟ್ಟರು.