ಬೆಂಗಳೂರು: ಕೊಂಕಣಿ ಸಾಹಿತಿ ಪೌಲ್ ಮೊರಾಸ್ಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಮಂಗಳೂರಿನ ವೈಟ್ ಡೌವ್ಸ್ ಸಂಸ್ಥೆ ಸಂಸ್ಥಾಪಕಿ ಕೋರೇನ್ ಆ್ಯಂಟೋನೆಟ್ ರಸ್ಕಿನ್ಹ ಅವರಿಗೆ ವೃತ್ತಿಪರ ಸಾಧನಾ ಪ್ರಶಸ್ತಿಯನ್ನು ಕೊಂಕಣಿ ಕ್ಯಾಥೋಲಿಕ್ ಸಂಘಗಳ ಒಕ್ಕೂಟದಿಂದ ಪ್ರದಾನ ಮಾಡಲಾಯಿತು.
ನಗರದಲ್ಲಿ ಭಾನುವಾರ ನಡೆದ ಒಕ್ಕೂಟದ 21ನೇ ಸಮಾವೇಶದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೊರಾಸ್, ಮೇಯರ್ ಸಂಪತ್ರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವರ್ಷದ ಉದ್ಯಮಿ ಪ್ರಶಸ್ತಿಗೆ ಆಯ್ಕೆಯಾದ ವಿವೇಕ್ ಅರಾನ್ಹ ಅನಾರೋಗ್ಯ ನಿಮಿತ್ತ ಸಮಾರಂಭಕ್ಕೆ ಬಂದಿರಲಿಲ್ಲ. ಅವರ ಬದಲು ಸಂಬಂಧಿಕರು ಪ್ರಶಸ್ತಿ ಸ್ವೀಕರಿಸಿದರು.
ಐವನ್ ಡಿಸೋಜಾ ಮಾತನಾಡಿ, ‘ಕೊಂಕಣಿ ಭಾಷೆಯ ಬೆಳವಣಿಗೆಗೆ ಕೊಂಕಣಿ ಭಾಷಾ ಪ್ರಾಧಿಕಾರದ ಅಗತ್ಯವಿದೆ. ಸಮುದಾಯದ ಯುವಜನರು ಐಎಎಸ್, ಐಪಿಎಸ್ ಹಾಗೂ ಐಆರ್ಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವತ್ತ ಚಿತ್ತ ಹರಿಸಬೇಕು’ ಎಂದರು.
ಒಕ್ಕೂಟದ ಅಧ್ಯಕ್ಷ ಎಡ್ವರ್ಡ್ ಆನಂದ್ ಡಿಸೋಜಾ, ‘ಕೊಂಕಣಿ ಭಾಷೆ ಬೆಳೆಸಲು ಮತ್ತು ಸಂಸ್ಕೃತಿಯನ್ನು ಉಳಿಸಲು ಒಕ್ಕೂಟವು ಶ್ರಮಿಸುತ್ತಿದೆ’ ಎಂದರು.
ಕಲಾವಿದರು ‘ಯುವರ್ಸ್ ಒಬಿಡಿಯಂಟ್ಲಿ’ ಕೊಂಕಣಿ ನಾಟಕ ಪ್ರದರ್ಶಿಸಿದರು.