ಕೊಳ್ಳೇಗಾಲ: ‘ನಗರಸಭೆಯು ಆರು ತಿಂಗಳಿಂದ ಸಂಬಳ ನೀಡಿಲ್ಲ’ ಎಂದು ಆರೋಪಿಸಿ ಪೌರಕಾರ್ಮಿಕರು ಕರ್ನಾಟಕ ಯುವಶಕ್ತಿ ವೇದಿಕೆಯ ನೇತೃತ್ವದಲ್ಲಿ ಇಲ್ಲಿನ ವಾಟರ್ ಟ್ಯಾಂಕ್ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರಸಭೆ ಅಧ್ಯಕ್ಷ ಎಸ್.ರಮೇಶ್ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಅಹವಾಲು ಆಲಿಸಿದರು. ‘ಮಳೆ–ಗಾಳಿ ಎನ್ನದೆ ಬೆಳಿಗ್ಗೆಯೇ ಕೆಲಸಕ್ಕೆ ಹಾಜರಾಗುತ್ತೇವೆ. ನಗರವನ್ನು ಸ್ವಚ್ಛವಾಗಿಡುವ ನಮ್ಮ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲು ಹಾಗೂ ಸಂಸಾರದ ನಿರ್ವಹಣೆ ಮಾಡಲು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಈ ವೇಳೆ ಮಾತನಾಡಿದ ವೇದಿಕೆಯ ಟೌನ್ ಅಧ್ಯಕ್ಷ ಆನಂದ್, ‘ಪೌರಕಾರ್ಮಿಕರಿಗೆ ಸಂಬಳ ಕೊಡದೆ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಅವರಿಗೆ ಸಂಬಳವನ್ನು ಕೂಡಲೇ ನೀಡಬೇಕು. ಇಲ್ಲದಿದ್ದರೆ ನಗರ ಸಭೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷ ಎಸ್.ರಮೇಶ್ ಮಾತನಾಡಿ, ‘ನಾನು ಅಧ್ಯಕ್ಷನಾಗಿ 5 ದಿನಗಳಾಗಿವೆ. ಈ ಬಗ್ಗೆ ಮಾಹಿತಿ ಇಲ್ಲ. ಎರಡು ದಿನಗಳಲ್ಲಿ ಪೌರಕಾರ್ಮಿಕರಿಗೆ ಸಂಬಳ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.