ದೇಶದಲ್ಲಿ ಮೊದಲ ಎಬೋಲಾ ಪ್ರಕರಣವು ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಈ ಕಾಯಿಲೆಯ ವಿರುದ್ಧ ರಾಷ್ಟ್ರದ ಸನ್ನದ್ಧತೆಯ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಲೈಬೀರಿಯಾದಿಂದ ದೆಹಲಿಗೆ ಬಂದಿಳಿದ ಭಾರತೀಯ ಯುವಕನಲ್ಲಿ (26) ಎಬೋಲಾ ರೋಗಲಕ್ಷಣಗಳು ಇರಲಿಲ್ಲ. ಜೊತೆಗೆ ಲೈಬೀರಿಯಾದ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಆತನಿಗೆ ‘ಎಬೋಲಾದಿಂದ ಮುಕ್ತನಾಗಿದ್ದಾನೆ’ ಎಂಬಂಥ ಪ್ರಮಾಣಪತ್ರವನ್ನು ಲೈಬೀರಿಯಾ ಆರೋಗ್ಯ ಸಚಿವಾಲಯ ನೀಡಿತ್ತು.
ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಎಬೋಲಾ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಆತನ ವೀರ್ಯದಲ್ಲಿ ಎಬೋಲಾ ವೈರಸ್ ಪತ್ತೆಯಾಯಿತು. ಈ ಪ್ರಕರಣದಲ್ಲಿ ಸೂಕ್ತ ನಿಗಾ ವಹಿಸಿ ಎಬೋಲಾ ವೈರಸ್ ಪತ್ತೆಹಚ್ಚಿರುವುದು ಸಮಾಧಾನಕರ ಅಂಶ. ವಿಮಾನ ನಿಲ್ದಾಣಗಳಲ್ಲಿನ ನಿಗಾ ವ್ಯವಸ್ಥೆಯ ಬಗ್ಗೆ ಇದು ಭರವಸೆ ಮೂಡಿಸುವಂತಹದ್ದು. ಈಗ ಈ ವ್ಯಕ್ತಿಯನ್ನು ದೆಹಲಿ ವಿಮಾನನಿಲ್ದಾಣದ ವಿಶೇಷ ಆರೋಗ್ಯ ಘಟಕದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈವರೆಗೆ ಭಾರತಕ್ಕೆ ಈ ಕಾಯಿಲೆಯ ಬಿಸಿ ತಾಗಿರಲಿಲ್ಲ. ಈಗ ತೀವ್ರ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅತ್ಯಗತ್ಯ ಎಂಬುದನ್ನು ಈ ಪ್ರಕರಣ ಎತ್ತಿತೋರಿದೆ.
ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಲೈಬೀರಿಯಾ, ಗಿನಿಯಾ, ಸಿಯೆರಾ ಲಿಯೋನ್ನಲ್ಲಿ ಎಬೋಲಾ ಸೋಂಕು ತೀವ್ರವಾಗಿದೆ. ಈ ರಾಷ್ಟ್ರಗಳಲ್ಲಿ ಸುಮಾರು 45,000 ಭಾರತೀಯರಿದ್ದಾರೆ. ಹಾಗೆಯೇ ನೈಜೀರಿಯಾದಲ್ಲೂ ಗಣನೀಯ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಈಗ ನೈಜೀರಿಯಾವನ್ನು ‘ಎಬೋಲಾ ಮುಕ್ತ’ ಎಂದು ಘೋಷಿಸಲಾಗಿದೆ. ಆದರೆ ಈ ಕಾಯಿಲೆ ನಿಯಂತ್ರಿಸುವ ಮೊದಲು ಅಲ್ಲಿ 8 ಮಂದಿ ಸತ್ತಿದ್ದರು.
ಎಬೋಲಾ ಇರುವ ರಾಷ್ಟ್ರಗಳಿಂದ ಅನೇಕ ಭಾರತೀಯರು ದೇಶಕ್ಕೆ ಹಿಂದಿರುಗಿದ್ದಾರೆ. ಇನ್ನೂ ಅನೇಕ ಮಂದಿ ಹಿಂದಿರುಗುವವರಿದ್ದಾರೆ. ಈ ರಾಷ್ಟ್ರಗಳ ಮಧ್ಯೆ ಓಡಾಟ ನಡೆಸುವವರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹಾಗೆಯೇ ಭಾರತದಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳ ಜನರಿದ್ದಾರೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಈ ಎಲ್ಲಾ ಅಂಶಗಳು, ಮುನ್ನೆಚ್ಚರಿಕೆ ವಿಚಾರದಲ್ಲಿ ನಮ್ಮಲ್ಲಿ ಕಾಳಜಿ ಹೆಚ್ಚಬೇಕಾಗಿರುವ ಅಗತ್ಯವನ್ನು ಪ್ರತಿಪಾದಿಸುತ್ತದೆ.
ಎಬೋಲಾ ವಿರುದ್ಧ ಸೆಣಸುವಂತಹ ಲಸಿಕೆಗಳಿನ್ನೂ ಪ್ರಯೋಗದ ಹಂತದಲ್ಲಿವೆ. ಹೀಗಾಗಿ ಪಶ್ಚಿಮ ಆಫ್ರಿಕಾ ಕಾಯಿಲೆ ಮುಕ್ತವಾಗುವವರೆಗೂ ಭಾರತ ಎಚ್ಚರ ವಹಿಸಬೇಕು. ಇದಕ್ಕಾಗಿ ವಿದೇಶಾಂಗ ವ್ಯವಹಾರ ಸಚಿವಾಲಯ, ನಾಗರಿಕ ವಿಮಾನಯಾನ ಮತ್ತು ವಲಸೆ ಅಧಿಕಾರಿಗಳ ಮಧ್ಯ ಸಮನ್ವಯ ಇರುವುದು ಮುಖ್ಯ. ಸನ್ನದ್ಧತೆ ಹೇಗಿದೆ ಎಂಬುದರ ತನಿಖೆಗಾಗಿ ಸಮಿತಿಯೊಂದನ್ನೂ ಕೇಂದ್ರ ಸರ್ಕಾರ ರಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿ ಸಂಖ್ಯೆಗಳ ಪ್ರಕಾರ ಎಬೋಲಾದಿಂದಾಗಿ 5,177 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ದೇಶದೊಳಗೆ ಸೋಂಕು ಹರಡದಂತೆ ನಿಯಂತ್ರಿಸಲು ಇದು ಬೇಕು. ಎಬೋಲಾ ಸೋಂಕು ಪತ್ತೆಗೆ ಪ್ರಯೋಗಾಲಯಗಳು, ರೋಗ ಪತ್ತೆಯಾದಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯಗಳು ಸನ್ನದ್ಧ ಸ್ಥಿತಿಯಲ್ಲಿರುವುದು ಅವಶ್ಯ. ಇದಕ್ಕಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.