ಐದು ಸಾವಿರ ಶಿಕ್ಷಕರ ನೇಮಕ; ಮೇ ಮೊದಲು ಪಠ್ಯಪುಸ್ತಕ
ಬೆಂಗಳೂರು, ಜ. 13– ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ಸಾಲಿಗಾಗಿ ಮಾರ್ಚ್ ವೇಳೆಗೆ 5,000 ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.
ಅಗತ್ಯಬಿದ್ದರೆ ಅವಶ್ಯಕತೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಎಚ್.ಜಿ. ಗೋವಿಂದೇಗೌಡ ಅವರು ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರಿಗೆ ಇಂದು ಇಲ್ಲಿ ತಿಳಿಸಿದರು.
ಪಂಚಾಯತ್ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ
ಬೆಂಗಳೂರು, ಜ. 13– ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಕಾಯ್ದೆ 1993ರ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಇಂದು ಹೊರಡಿಸಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಹೊರಡಿಸಿರುವ ಈ ತಿದ್ದುಪಡಿ ಸುಗ್ರೀವಾಜ್ಞೆಯಲ್ಲಿ ಹಿಂದುಳಿದವರು ಯಾರು ಎಂಬ ಬಗೆಗೆ ಮರುವ್ಯಾಖ್ಯಾನ ಮಾಡಿದ್ದು, ಹಿಂದುಳಿದವರನ್ನು ‘ಎ’ ಮತ್ತು ‘ಬಿ’ ಎಂದು ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.
‘ಎ’ ಗುಂಪಿನಲ್ಲಿ ಅತಿ ಹಿಂದುಳಿದವರು ಮತ್ತು ಹೆಚ್ಚು ಹಿಂದುಳಿದವರು ಸೇರಿದ್ದು, ‘ಬಿ’ ಗುಂಪಿನಲ್ಲಿ ಇತರ ಹಿಂದುಳಿದ ಜಾತಿಗಳು ಸೇರುತ್ತವೆ. ಸುಗ್ರೀವಾಜ್ಞೆ ಜತೆಯಲ್ಲಿಯೇ ಈ ಎರಡೂ ಗುಂಪುಗಳಲ್ಲಿ ಸೇರಿರುವ ಜಾತಿಗಳ ಬಗೆಗೆ ಆದೇಶ ಹೊರಡಿಸಲಾಗಿದೆ.
ಹಿಂದುಳಿದವರಿಗೆ ದೊರೆಯುವ ಶೇಕಡ 33ರಷ್ಟು ಮೀಸಲಿನಲ್ಲಿ ‘ಎ‘ ಗುಂಪಿನವರಿಗೆ ಶೇಕಡ 80ರಷ್ಟು ಹಾಗೂ ‘ಬಿ’ ಗುಂಪಿನವರಿಗೆ ಶೇಕಡ 20ರಷ್ಟು ಮೀಸಲು ಸಿಗುತ್ತದೆ.
ಶ್ರೀವಾಸ್ತವ ಷಾಮೀಲು: ಹೈಕೋರ್ಟ್ ತೀರ್ಪು
ಕೊಚ್ಚಿ, ಜ. 13 (ಪಿಟಿಐ)– ಕುತೂಹಲ ಕೆರಳಿಸಿರುವ ಇಸ್ರೋ ಗೂಢಚರ್ಯೆ ಪ್ರಕರಣದಲ್ಲಿ ಕೇರಳ ಐ.ಜಿ ರಾಮನ್ ಶ್ರೀವಾಸ್ತವ ಅವರು ‘ಬುದ್ಧ್ಯಾಪೂರ್ವಕ’ ಭಾಗಿಯಾಗಿದ್ದಾರೆ ಎಂದು ರಾಜ್ಯ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸದೆ ಇರುವ ಸಿಬಿಐ ಅನ್ನು ಅದು ತರಾಟೆಗೆ ತೆಗೆದುಕೊಂಡಿದೆ.
ಬೇಹುಗಾರಿಕೆ ದಳದ (ಐಬಿ) ವರದಿಯ ಮೇಲೆ ತೀರ್ಪು ನೀಡಿರುವ ಕೋರ್ಟ್, ವಿಷಯವನ್ನು ಪುನರ್ಪರಿಶೀಲಿಸುವಂತೆ ಸಿಬಿಐ ನಿರ್ದೇಶಕ ಕೆ. ವಿಜಯರಾಮರಾಜ್ ಅವರಿಗೆ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.