ಯು.ಪಿ ವಿಧಾನಸಭೆಯಲ್ಲಿ ಕೋಲಾಹಲ ಲಖನೌ, ಜೂನ್ 30– ಉತ್ತರಪ್ರದೇಶ ವಿಧಾನಸಭೆಯಲ್ಲಿ ಇಂದು ಸರ್ಕಾರಿ ನಿರ್ಣಯಕ್ಕೆ ಸೋಲು ಸಂಭವಿಸಿದ ನಂತರ ಮುಖ್ಯಮಂತ್ರಿ ಶ್ರೀ ಚರಣ್ಸಿಂಗ್ ಅವರು ಕೋರಿದ ವಿಶ್ವಾಸಮತ ದೊರೆತು, ನಿಶ್ಚಿತ ವೇಳೆಗಿಂತ 40 ನಿಮಿಷ ಮೊದಲೇ ಸಭೆ ಹಠಾತ್ತನೆ ಮುಕ್ತಾಯವಾಯಿತು.
ಸರ್ಕಾರಿ ನಿರ್ಣಯಕ್ಕೆ ಸೋಲಾದ ನಂತರ ಸಭೆಯನ್ನು ಮೊದಲು 15 ನಿಮಿಷಗಳ ಕಾಲ, ಅನಂತರ ಎರಡು ಗಂಟೆಗಳ ಕಾಲ, ಪುನಃ 15 ನಿಮಿಷಗಳ ಕಾಲ– ಹೀಗೆ ಮೂರು ಬಾರಿ ಮುಂದಕ್ಕೆ ಹಾಕಲಾಗಿತ್ತು.
ತಾವು ಜಾಟರೆಂದೂ ಮುಖ್ಯಮಂತ್ರಿಯ ಬಂಧುವೆಂದೂ ಜನರಿಗೆ ಹೇಳುತ್ತಾ ಬಹರೈಚ್ನ ಜಿಲ್ಲಾ ಸರಬರಾಜು ಅಧಿಕಾರಿ ಲಂಚ ತೆಗೆದುಕೊಂಡರೆಂದು ಪ್ರಶ್ನೆಯೊಂದರ ಸಮಯದಲ್ಲಿ ಎಸ್ಎಸ್ಪಿ ನಾಯಕ ಶ್ರೀ ಎ.ಕೆ.ಜೈಸ್ವಾಲ್ ಅವರು ಟೀಕಿಸಿದಾಗ ಸಭೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ಪ್ರಾರಂಭವಾಯಿತು.
ಕೃಷಿ ಸಂಶೋಧನಾ ಮಂಡಳಿ: ಶಾಸನಬದ್ಧ ಸ್ಥಾನಮಾನ ನವದೆಹಲಿ, ಜೂನ್ 30– ಭಾರತ ಕೃಷಿ ಸಂಶೋಧನಾ ಮಂಡಳಿಯನ್ನು ಶಾಸನಬದ್ಧ ಸಂಸ್ಥೆಯಾಗಿ ಪರಿವರ್ತಿಸಿ ಅದನ್ನು ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯೆಂದು ಘೋಷಿಸಲು ಕೇಂದ್ರ ಸಚಿವ ಸಂಪುಟ ಇಂದು ಇಲ್ಲಿ ನಿರ್ಧರಿಸಿತು.