‘ಕಪ್ಪು’ಹಣ ಹೊರತೆಗೆಸಲು ನೋಟುಗಳ ಚಲಾವಣೆ ರದ್ದು ಮಾಡಲು ಸರ್ಕಾರ ಉದ್ದೇಶಿಸಿಲ್ಲ: ಸೇಠಿ
ನವದೆಹಲಿ, ಡಿ. 9– ‘ಕಪ್ಪುಹಣ’ವನ್ನು ಹೊರತೆಗೆಸಲು ನೋಟುಗಳ ಚಲಾವಣೆಯನ್ನು ರದ್ದುಪಡಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ಸ್ಟೇಟ್ ಸಚಿವ ಶ್ರೀ ಪಿ.ಸಿ. ಸೇಠಿ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.
ಶ್ರೀ ರಾಮ ಸಹಾಯ್, ಶ್ರೀ ನಿರೇನ್ ಘೋಷ್ ಹಾಗೂ ಇತರರಿಗೆ ಉತ್ತರ ಕೊಡುತ್ತಿದ್ದ ಶ್ರೀ ಸೇಠಿ ಅವರು ‘ನೂರು ರೂಪಾಯಿ ನೋಟುಗಳ ಚಲಾವಣೆ ರದ್ದು ಮಾಡುವುದೆಂದರೆ, ಅದು ಒಟ್ಟು ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇಕಡ 48ರಷ್ಟಾಗುತ್ತದೆ’ ಎಂದರು.
ನೋಟು ಚಲಾವಣೆ ರದ್ದು ಮಾಡುವ ಹಿಂದಿನ ಯೋಜನೆ ಪ್ರಯೋಜನಕಾರಿ ಯಾಗಲಿಲ್ಲವೆಂದೂ ಅವರು ನುಡಿದರು.
ರಾಂಪುರ ಮಾಜಿ ರಾಜರ ಪುತ್ರನಿಂದ ‘ನವಾಬ್ಜಾದಾ’ ಬಿರುದು ತಿರಸ್ಕಾರ
ನವದೆಹಲಿ, ಡಿ. 9– ರಾಂಪುರದ ಮಾಜಿ ಆಡಳಿತಾಧಿಕಾರಿಗಳ ಕಿರಿಯ ಪುತ್ರನಾಗಿ ಅನುಭವಿಸುತ್ತಿದ್ದ ಎಲ್ಲ ಸವಲತ್ತುಗಳನ್ನೂ ತಿರಸ್ಕರಿಸುವುದಾಗಿ ಲೋಕಸಭೆಯಲ್ಲಿ ಸ್ವತಂತ್ರ ಸದಸ್ಯರಾಗಿರುವ ಜುಲ್ಫಿಕರ್ ಆಲಿ ಖಾನ್ ಅವರು ಇಂದು ಇಲ್ಲಿ ಪ್ರಕಟಿಸಿದರು.
ಈ ಹಕ್ಕು ಬಾಧ್ಯತೆಗಳೆಲ್ಲಾ ಪ್ರಜಾ ಸತ್ತಾತ್ಮಕ ರೀತಿಯ ಜೀವನಕ್ಕೆ ತದ್ವಿರುದ್ಧವಾಗಿರುವುದಾಗಿ, ‘ನವಾಬ್ಜಾದಾ’ ಎಂಬ ಬಿರುದನ್ನೂ ತಿರಸ್ಕರಿಸಿರುವುದಾಗಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.