ಬೆಂಗಳೂರು, ಸೆ. 3– ಕಿಟಕಿ ಬಾಗಿಲುಗಳ ಗಾಜುಗಳನ್ನೊಡೆದು ಮೇಜು ಕುರ್ಚಿಗಳನ್ನು ಹೊರಗೆಳೆದು ಸ್ವತ್ತು ಹಾನಿಗೆ ತೊಡಗಿದ ವಿದ್ಯಾರ್ಥಿಗಳನ್ನು ಚದುರಿಸಲು ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ಇಂದು ಮಧ್ಯಾಹ್ನ ಪೊಲೀಸರನ್ನು ಕರೆಸಲಾಯಿತು.
ಎಕ್ಸ್ಪೋ ಪ್ರವಾಸ ರದ್ದುಗೊಳಿಸುವಂತೆ ಒತ್ತಾಯಪಡಿಸಿ ವಿದ್ಯಾರ್ಥಿಗಳು ಹೂಡಿರುವ ಮುಷ್ಕರ ಹಿಂಸಾಚಾರಕ್ಕೆ ಕಾರಣವಾಯಿತು.
ಮುಷ್ಟಿ ತೋರಿದ ಎಂ.ಪಿಗಳಿಗೆ ಸ್ಪೀಕರ್ ಛೀಮಾರಿ
ನವದೆಹಲಿ, ಸೆ. 3– ಲೋಕಸಭೆಯಲ್ಲಿ ಇಂದು ಕಮ್ಯುನಿಸ್ಟ್ ಮತ್ತು ಜನಸಂಘದ ಇಬ್ಬರು ಸದಸ್ಯರ ನಡುವೆ ಹೊಡೆದಾಟ ನಡೆಯುವವರೆಗೆ ಪರಿಸ್ಥಿತಿ ಪ್ರಕೋಪಕ್ಕಿಟ್ಟುಕೊಂಡು ಗದ್ದಲದ ವಾತಾವರಣ ತಲೆದೋರಿತ್ತು.
ಪರಸ್ಪರ ಅವಹೇಳನದ ನಂತರ ಎಚ್.ಸಿ. ಕಚ್ಚಾಯಿ (ಜನಸಂಘ) ಮತ್ತು ರಾಮ್ ಅವತಾರ್ ಶಾಸ್ತ್ರಿ (ಸಿ.ಪಿ.ಐ) ಅವರು ಒಬ್ಬರ ಕಡೆಗೆ ಒಬ್ಬರು ನುಗ್ಗುತ್ತಿದ್ದಾಗ ಅವರನ್ನು ಸಮಾಧಾನಗೊಳಿಸಲು ಸಹೋದ್ಯೋಗಿಗಳಿಗೆ ಐದು ನಿಮಿಷ ಹಿಡಿಯಿತು.
‘ಸದಸ್ಯರು ಪ್ರತೀ ವಿಷಯವನ್ನೂ ಮುಷ್ಟಿಗಳಿಂದ ತೀರ್ಮಾನಿಸುವುದಾದರೆ ಸಂಸತ್ತಿನ ಅಗತ್ಯವಿಲ್ಲ. ಸಂಸತ್ತಿನಲ್ಲಿ ಕುಳಿತುಕೊಂಡರೆ ವಾದಿಸಬೇಕು. ಪರಸ್ಪರ ಸಹಿಸಿಕೊಳ್ಳಬೇಕು. ಕೂಗಾಟಕ್ಕೆ ಇದೊಂದು ವೇದಿಕೆ ಅಲ್ಲ’ ಎಂದು ಸಭಾಧ್ಯಕ್ಷ ಶ್ರೀ ಜಿ.ಎಸ್.ಧಿಲ್ಲೋನ್ ಹೇಳಿದರು.