ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಳಿಗೆಮಣೆಯಿಂದ ಹೊಡೆದು ಪ್ರಿಯಕರನ ಹತ್ಯೆ

ಮಗಳ ಮೇಲೆ ಕಣ್ಣು ಹಾಕಿದ್ದಕ್ಕೆ ಮಹಿಳೆಯಿಂದ ಕೃತ್ಯ
Last Updated 29 ಮಾರ್ಚ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ 14 ವರ್ಷದ ಮಗಳ ಮೇಲೆ ಕಣ್ಣು ಹಾಕಿದ ಪ್ರಿಯಕರನಿಗೆ ನಿದ್ರೆ ಮಾತ್ರೆ ಬೆರೆಸಿದ ಮುದ್ದೆ ನುಂಗಿಸಿದ ಮಹಿಳೆ, ಆತ ಮಲಗುತ್ತಿದ್ದಂತೆಯೇ ಈಳಿಗೆಮಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಪೀಣ್ಯ ಸಮೀಪದ ಅನ್ನಪೂರ್ಣೇಶ್ವರಿನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು 32 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.

ತಮಿಳುನಾಡಿನ ರಘು (35), ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ದಾಸರಹಳ್ಳಿಯಲ್ಲಿ ನೆಲೆಸಿದ್ದ. ತಿ‍ಪಟೂರಿನ ಆ ಮಹಿಳೆಗೂ ಈಗಾಗಲೇ ವಿವಾಹವಾಗಿದ್ದು, ಪತಿ–ಇಬ್ಬರು ಹೆಣ್ಣು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಘುಗೆ, ಆರು ತಿಂಗಳ ಹಿಂದೆ ಮಹಿಳೆಯ ಪರಿಚಯವಾಗಿತ್ತು. ಕ್ರಮೇಣ ಅವರ ಸ್ನೇಹ ಅನೈತಿಕ ಸಂಪರ್ಕಕ್ಕೆ ತಿರುಗಿತ್ತು. ಮಹಿಳೆಯ ಪತಿ ಬುಧವಾರ ಸಂಜೆ ತಿಪಟೂರಿನ ಜಾತ್ರೆಗೆ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪತಿ ಊರಿಗೆ ಹೋಗಿರುವ ವಿಚಾರ ತಿಳಿದು ರಾತ್ರಿ 11 ಗಂಟೆ ಸುಮಾರಿಗೆ ಪಾನಮತ್ತನಾಗಿ ಮನೆಗೆ ಬಂದ ರಘು, ಕೋಣೆಯಲ್ಲಿ ಮಲಗಿದ್ದ ಹಿರಿಯ ಮಗಳ ಮೇಲೆ ಕಣ್ಣು ಹಾಕಿದ್ದ. ಆಕೆ ಜತೆಗೂ ತಾನು ಲೈಂಗಿಕ ಸಂಪರ್ಕ ನಡೆಸಬೇಕೆಂದು ಗಲಾಟೆ ಮಾಡಿದ್ದ. ಇದರಿಂದ ಕೆರಳಿದ ಮಹಿಳೆ, ಆತನನ್ನು ಕೊಲ್ಲಲು ನಿರ್ಧರಿಸಿದ್ದರು.

‘ಮೊದಲು ಊಟ ಮಾಡಿ ಆಮೇಲೆ ಮಾತನಾಡೋಣ ಎಂದು ನಿದ್ರೆ ಮಾತ್ರೆ ಬೆರೆಸಿದ್ದ ಮುದ್ದೆ–ಸಾರು ಹಾಕಿ ಕೊಟ್ಟೆ. ಅದನ್ನು ತಿಂದ ಸ್ವಲ್ಪ ಸಮಯದಲ್ಲೇ ಆತ ನಿದ್ರೆಗೆ ಜಾರಿದ. ಆ ನಂತರ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದೆ. ಕೊನೆಗೆ ಈಳಿಗೆಮಣೆಯಿಂದ ಕುತ್ತಿಗೆಗೆ ಹೊಡೆದೆ’ ಎಂದು ಮಹಿಳೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

‘ಆತ ಮಗಳ ಮೇಲೆ ವ್ಯಾಮೋಹ ಹೊಂದಿದ್ದ. ನಾನಿಲ್ಲದ ಸಂದರ್ಭದಲ್ಲಿ ಆಕೆ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ವಿಚಾರ ಗೊತ್ತಾದ ಬಳಿಕ ಮನೆಗೆ ಬಾರದಂತೆ ಎಚ್ಚರಿಸಿದ್ದೆ. ಆದರೂ, ಬುಧವಾರ ರಾತ್ರಿ ಬಂದು ಗಲಾಟೆ ಮಾಡಿದ್ದ. ಸುಮ್ಮನೆ ಬಿಟ್ಟರೆ, ನಮಗೆ ಉಳಿಗಾಲವಿಲ್ಲ ಎಂದು ಹತ್ಯೆಗೈದೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT