ಬೆಂಗಳೂರು, ಸೆ. 13– ರಾಜ್ಯ ಸರ್ಕಾರ ಭಾಗವಹಿಸದ ಕಾರಣ ದಸರಾದ ಪ್ರಮುಖ ಆಕರ್ಷಣೆಗಳಾದ ದರ್ಬಾರ್ ಜಂಬೂಸವಾರಿ ಹಾಗೂ ಟಾರ್ಚ್ಲೈಟ್ ಪರೇಡ್ ಉತ್ಸವಗಳು ನಡೆಯದಿರುವುದು ಖಚಿತವಾದಂತಾಗಿದೆ.
ಈ ಉತ್ಸವಗಳನ್ನು ಮಾಜಿ ಮಹಾರಾಜರು ಸರ್ಕಾರದ ಯಾವ ಪಾತ್ರವೂ ಇಲ್ಲದೆ ಖಾಸಗಿಯಾಗಿ ಆಚರಿಸಿಕೊಳ್ಳಲು ಅವಕಾಶವಿದೆ.
ಆದರೆ, ಖಾಸಗಿಯಾಗಿ ಈ ಉತ್ಸವಗಳನ್ನು ಜರುಗಿಸಲು ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ಇಷ್ಟವಿಲ್ಲ ಎಂಬ ಭಾವನೆ ತಮಗೆ ಮೂಡೆತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಮಾಜಿ ಮಹಾರಾಜರನ್ನು ಭೇಟಿ ಮಾಡಿದ ನಂತರ ವರದಿಗಾರರಿಗೆ ತಿಳಿಸಿದರು.
ವಿದ್ಯುತ್ ಯೋಜನೆಗಳ ರಾಷ್ಟ್ರೀಯ ಜಾಲ ರಚನೆಗೆ ಗಿರಿ ಸಲಹೆ
ಬೆಂಗಳೂರು, ಸೆ. 12– ನಾನಾ ರಾಜ್ಯಗಳ ವಿದ್ಯುಚ್ಛಕ್ತಿ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿಸಿ ಈ ಯೋಜನೆಗಳ ರಾಷ್ಟ್ರೀಯ ಜಾಲವನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.
‘ಈ ರೀತಿ ವ್ಯವಸ್ಥೆಯಿಂದ ದೇಶದ ಎಲ್ಲ ಭಾಗಗಳಿಗೂ ಸಾಕಷ್ಟು ವಿದ್ಯುಚ್ಛಕ್ತಿ ದೊರಕಿ ಕೆಲವೆಡೆ ವಿದ್ಯುಚ್ಛಕ್ತಿಯ ಅಭಾವ ಮತ್ತೆ ಕೆಲವೆಡೆ ಬೇಡಿಕೆಗಿಂತ ಅಧಿಕ ವಿದ್ಯುಚ್ಛಕ್ತಿ ಇರುವ ಸ್ಥಿತಿ ತಪ್ಪುತ್ತೆ’ ಎಂದರು.