ರಾಜ್ಯದ ಹಿಂದುಳಿದ ಜಾತಿಗಳ ವರ್ಗೀಕರಣ ಯಾದಿ ಪ್ರಕಟ ಬೆಂಗಳೂರು, ಏ. 25– ತೀವ್ರ ವಿವಾದಕ್ಕೊಳಗಾಗಿದ್ದ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲಿ ಕೆಲ ಬದಲಾವಣೆಗಳೊಂದಿಗೆ ಹಿಂದುಳಿದ ವರ್ಗಗಳನ್ನು ನಾಲ್ಕ ವಿಭಾಗಗಳಾಗಿ ವಿಂಗಡಿಸಿ ಶೇ 50ರಷ್ಟು ಮೀಸಲಾತಿ ಕಲ್ಪಿಸುವ ವಿಧ್ಯುಕ್ತ ಆದೇಶವನ್ನು ರಾಜ್ಯ ಸರ್ಕಾರ ಇಂದು ಅಧಿಕೃತವಾಗಿ ಹೊರಡಿಸಿತು.
ಮೀಸಲು ನೀತಿಯಡಿ ಅತ್ಯಂತ ಹಿಂದುಳಿದವರು, ಅತಿ ಹಿಂದುಳಿದವರು, ಹಿಂದುಳಿದವರು ಮತ್ತು ವೃತ್ತಿಪರರು ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂದುವರಿದ ಜಾತಿಗಳ ಹಿಂದುಳಿದವರನ್ನೂ ಈ ವರ್ಗಗಳಲ್ಲಿ ಸೇರಿಸಲಾಗಿದೆ.
ಪರಿಷ್ಕೃತ ಮೀಸಲು ನೀತಿಯ ಪ್ರಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅತ್ಯಂತ ಹಿಂದುಳಿದವರಿಗೆ ಶೇಕಡ 5, ಅತಿ ಹಿಂದುಳಿದವರಿಗೆ ಶೇಕಡ 28, ಹಿಂದುಳಿದವರಿಗೆ ಶೇಕಡ 12 ಹಾಗೂ ವೃತ್ತಿಪರರ ಗುಂಪಿಗೆ ಶೇಕಡ 5ರಷ್ಟು ಮೀಸಲಾತಿ ಸೌಲಭ್ಯ ಒದಗಿಸಲಾಗುವುದು.
ವಿಜಾಪುರದಲ್ಲಿ ಹೊಸ ಆಕಾಶವಾಣಿ ಕೇಂದ್ರ ನವದೆಹಲಿ, ಏ. 25– ಕರ್ನಾಟಕದ ವಿಜಾಪುರ ಸೇರಿದಂತೆ ದೇಶದ 40 ಕಡೆ ಹೊಸ ಆಕಾಶವಾಣಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಕೆ.ಪಿ. ಸಿಂಗ್ ದೇವ್ ಅವರು ಇಂದು ಲೋಕಸಭೆಯಲ್ಲಿ ಹರಿನ್ ಪಾಠಕ್ ಅವರಿಗೆ ತಿಳಿಸಿದರು.