ರಾ ಜ್ಯದ ಶಾಲೆಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಚರ್ಚೆಗಳಾಗುತ್ತಿವೆ. ರಾಜ್ಯ ಶಾಲಾ ಗುಣಮಟ್ಟ ಮಾಪನ ಮತ್ತು ಮಾನ್ಯತಾ ಮಂಡಳಿಯು ರಾಜ್ಯದ ೧,೦೨೦ ಸರ್ಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ನಮ್ಮ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂದು ಹೇಳಿದುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಎನ್.ಸಿ.ಇ.ಆರ್.ಟಿ., ಪ್ರಥಮ್ ಹಾಗೂ ಇನ್ನಿತರ ರಾಷ್ಟ್ರೀಯ ಸಮೀಕ್ಷೆಗಳಲ್ಲಿಯೂ ದೇಶದ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವು ಉತ್ತಮ ವಾಗಿಲ್ಲದಿರುವ ಬಗ್ಗೆ ಇದೇ ರೀತಿಯ ಅಭಿಪ್ರಾಯಗಳು ಪ್ರಕಟಗೊಂಡಿವೆ. ವಿಶ್ವದ ಅತ್ಯುತ್ತಮ ೨೦೦ ವಿಶ್ವವಿದ್ಯಾಲಯಗಳಲ್ಲಿ ನಮ್ಮ ದೇಶದ ಒಂದೂ ವಿಶ್ವವಿದ್ಯಾಲಯ ಇಲ್ಲದಿರುವುದು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಶೈಕ್ಷಣಿಕ ಗುಣಮಟ್ಟವು ಆಶಾದಾಯಕವಾಗಿಲ್ಲವೆಂದು ಹೇಳಲು ಸಮೀಕ್ಷೆಗಳ ಅಗತ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಕಣ್ಣಿಗೆ ಕಾಣುವಂತೆ ಶಾಲೆ ಮತ್ತು ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವು ಇರುವುದನ್ನು ಕಾಣಬಹುದಾಗಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮಾತ್ರ ಶಿಕ್ಷಣದ ಗುಣಮಟ್ಟ ಸಮರ್ಪಕವಾಗಿಲ್ಲವೆಂದು ಹೇಳು ವಂತಿಲ್ಲ. ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಒಳಗಿನ ಅಂತಃಸ್ಸತ್ವಕ್ಕಿಂತ ಹೊರ ನೋಟದ ಭವ್ಯ ಆಡಂಬರವೇ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವು ಅತ್ಯುತ್ತಮ ವಾಗಿರುವುದಿಲ್ಲ.
ಶಾಲೆಗಳಿಗೆ ಒದಗಿಸುವ ದೊಡ್ಡ ಮಟ್ಟದ ಅನುದಾನಗಳಾಗಲೀ, ಭವ್ಯ ಕಟ್ಟಡ ಅಥವಾ ಉತ್ತಮ ಭೌತಿಕ ಸಂಪನ್ಮೂಲಗಳೇ ಆಗಲಿ ನಮ್ಮ ಶಿಕ್ಷಣದ ಗುಣಮಟ್ಟದ ಅಳತೆಗೋಲುಗಳಾಗ ಲಾರವು. ಶಾಲೆಯು ಉತ್ತಮ ಭೌತಿಕ ಸೌಲಭ್ಯ ಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಪರಿಣಾಮ ಕಾರಿ ಕಲಿಕೆ, ಜೀವನ ಕೌಶಲಗಳ ಮೈಗೂಡಿ ಸಿಕೊಳ್ಳುವಿಕೆಗೆ ಸಹಕಾರಿಯಾಗುವ ಜೊತೆ ವಿದ್ಯಾರ್ಥಿಗಳು ಸಂತಸ ಹಾಗೂ ಸುರಕ್ಷತೆಯಿಂದ ಶಾಲೆಯನ್ನು ಪ್ರೀತಿಸುವಂತೆ ಮಾಡಿದಲ್ಲಿ ಅದು ತನ್ನ ಕಾರ್ಯದಲ್ಲಿ ಯಶ ಕಂಡಿದೆ ಎನ್ನಬಹುದು.
ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರ ಜೊತೆ ನಿರಂತರವಾಗಿ ತಮ್ಮ ಜ್ಞಾನ ಮತ್ತು ಅನುಭವವನ್ನು ಪರಿಷ್ಕರಿಸಿಕೊಳ್ಳುವ ಮೂಲಕ ಸಕ್ರಿಯವಾಗಿರುವುದೂ ಶಾಲೆಯ ಶೈಕ್ಷಣಿಕ ಗುಣ ಮಟ್ಟದ ಸೂಚಕ ಎನ್ನಲು ಅಡ್ಡಿಯಿಲ್ಲ.
ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ಕಾರಣವಾದ ಅಂಶಗಳ ಕುರಿತಂತೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ದಾಖಲೆ (2005), ಉತ್ತಮವಾದ ವಿಶ್ಲೇಷಣೆಯನ್ನು ಮಾಡಿದೆ. ನಮ್ಮ ಶಾಲೆ ಮತ್ತು ಶಿಕ್ಷಕರಿಗೆ ತಮ್ಮ ಶಾಲೆಯ ಅವಶ್ಯಕತೆಗಳಿಗೆ ತಕ್ಕಂತಹ ಕಾರ್ಯಕ್ರಮ ಮತ್ತು ಚಟು ವಟಿಕೆಗಳನ್ನು ರೂಪಿಸಲು ಅವಶ್ಯವಾಗಿ ಇರ ಬೇಕಾದಂತಹ ಸ್ವಾತಂತ್ರ್ಯ ಇಲ್ಲ. ಶಾಲೆಗಳಿಗೆ ಅಗತ್ಯವಾದ ಕಾರ್ಯಕ್ರಮ ಅಥವಾ ಯೋಜನೆಗಳು ಬಹುಪಾಲು ಉನ್ನತ ಸ್ತರಗಳಲ್ಲಿಯೇ ನಿರ್ಧಾರವಾಗುತ್ತವೆ. ನಮ್ಮ ಎಲ್ಲಾ ಯೋಜನೆಗಳು ಮೇಲಿನಿಂದ ಕೆಳಗೆ ಚಲಿಸುತ್ತವೆಯೇ ಹೊರತು ಶಾಲಾ ಹಂತದಿಂದ ಮೇಲ್ಮುಖವಾಗಿ ಚಲಿಸುತ್ತಿಲ್ಲ. ಈ ಕುರಿತಂತೆ ಪ್ರಯತ್ನಗಳು ಜಾರಿಯಲ್ಲಿದ್ದರೂ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಶಾಲಾ ಹಂತದಲ್ಲಿನ ಅವಶ್ಯಕತೆಗಳ ಕುರಿತು ಚಿಂತಿಸಿ, ಅದಕ್ಕೆ ಪೂರಕವಾದ ಚಟುವಟಕೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ನಮ್ಮ ಶಿಕ್ಷಕರು ಹಾಗೂ ಸ್ಥಳೀಯ ಸಮುದಾಯವನ್ನು ಸಜ್ಜುಗೊಳಿಸುವಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಯಶಸ್ವಿಯಾಗಿಲ್ಲ. ಪ್ರತಿ ಶಾಲೆಯು ವಿಭಿನ್ನ ಮತ್ತು ವಿಶಿಷ್ಟ. ಪ್ರತಿ ಶಾಲೆಗೆ ಬರುವ ವಿದ್ಯಾರ್ಥಿಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನೆಲೆಯು ವಿಭಿನ್ನವಾಗಿದ್ದು, ಇದಕ್ಕೆ ತಕ್ಕಂತೆ ಸಮಸ್ಯೆ ಅಥವಾ ಸವಾಲುಗಳು ಇರುತ್ತವೆ. ಈ ಸ್ಥಳೀಯ ಸನ್ನಿವೇಶಗಳಿಗೆ ಸರಿಹೊಂದುವಂತಹ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಪ್ರತಿ ಶಾಲೆಯು ತನ್ನ ಸ್ಥಳೀಯ ನೆಲೆಗಟ್ಟಿನಲ್ಲಿ ರೂಪಿಸುವ ಅಗತ್ಯ ಇರುತ್ತದೆ. ಇದಕ್ಕೆ ಬದಲಾಗಿ ಉನ್ನತ ಸ್ತರಗಳಲ್ಲಿ ರೂಪಿಸಲ್ಪಟ್ಟ ಕಾರ್ಯಕ್ರಮ ಅಥವಾ ಚಟುವಟಿಕೆಗಳು ಸ್ಥಳೀಯ ಶಾಲಾ ಸನ್ನಿವೇಶಕ್ಕೆ ಪೂರಕವಾಗದೇ ಅವಶ್ಯವಾದಷ್ಟು ಪರಿಣಾಮ ಬೀರದೆ ವಿಫಲವಾಗುತ್ತವೆ. ತಮ್ಮ ಶಾಲೆಗೆ ಏನು ಅಗತ್ಯ ಹಾಗೂ ಇದಕ್ಕಾಗಿ ತಾವೇನು ಯೋಜನೆ ಅಥವಾ ಕಾರ್ಯಕ್ರಮ ರೂಪಿಸಿಕೊಳ್ಳಬೇಕು ಎಂಬ ಬಗ್ಗೆ ನಮ್ಮ ಶಿಕ್ಷಕರು ಆಲೋಚಿಸಲು ಸಾಧ್ಯವಾಗುತ್ತಿಲ್ಲ.
ದೇಶದ ಅಥವಾ ಪ್ರತಿ ಗ್ರಾಮ, ನಗರಗಳ ಲ್ಲಿರುವ ಶಾಲೆಗಳ ವಿಶಿಷ್ಟ ಪರಿಸ್ಥಿತಿಗಳಿಗನುಗುಣ ವಾಗಿ ಏಕ ರೀತಿಯ ಕಾರ್ಯಕ್ರಮಗಳನ್ನು ವಿನ್ಯಾಸ ಗೊಳಿಸುವುದು ಸಾಧ್ಯವಾಗದು. ಹಾಗಾದಲ್ಲಿ ಪರಿಹಾರವೇನು? ಎಂಬ ಪ್ರಶ್ನೆ ಮೂಡಬಹುದು. ಪ್ರತಿ ಶಾಲೆ ಅಥವಾ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಆದ್ಯತೆಗಳನ್ನು ತಾವೇ ಗುರುತಿಸಿ, ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಯೋಜಿಸಲು ಶಿಕ್ಷಕರನ್ನು ಸಮರ್ಥ ರನ್ನಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆ, ಕಾಲೇಜು ತನಗೆ ಬೇಕಾದ ಮಾಹಿತಿ,ತರಬೇತಿ, ಆರ್ಥಿಕ ಅಥವಾ ಭೌತಿಕ ಸಂಪನ್ಮೂಲ, ಕಾರ್ಯಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯ ಇರಬೇಕು.
ಶಾಲೆ, ಕಾಲೇಜು ಹೊರತುಪಡಿಸಿ ಇತರ ಎಲ್ಲ ಸ್ತರಗಳು ಶಾಲೆ ಕೋರಿಕೊಳ್ಳುವ ಬೆಂಬಲವನ್ನು ಒದಗಿಸಲು ಮಾತ್ರ ಪ್ರಯತ್ನಿಸಬೇಕು. ಇಲ್ಲಿಯ ವರೆಗೂ ನಾವು ಪೂರೈಕೆಯ ದೃಷ್ಟಿಯಿಂದ ನಮಗೆ ಬೇಕೆನಿಸಿದ್ದನ್ನೆಲ್ಲ ಶಾಲೆಗಳಿಗೆ ನೀಡಿದ್ದೇವೆ ಯೇ ಹೊರತು ಶಿಕ್ಷಣ ಸಂಸ್ಥೆಗಳು ತಮಗೆ ಅಗತ್ಯವಾದ ಬೇಡಿಕೆಯನ್ನು ಮುಂದಿಡುವ ವಾತಾವರಣದ ಸೃಷ್ಟಿ ಮಾಡಲು ಹೋಗಿಲ್ಲ.
ನಮ್ಮ ಶಾಲೆ, ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಇನ್ನೊಂದು ಮಹತ್ವದ ಬದಲಾವಣೆಯಾಗಬೇಕಿದೆ. ನಮ್ಮ ಶಾಲೆ, ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳು ಕಲಿಕೆಯ ಸಂಸ್ಥೆಗಳಾಗಿ ರೂಪುಗೊಳ್ಳಬೇಕಿದೆ. ಶಾಲೆಗಳು ತಮ್ಮ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆ ಹಾಗೂ ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡಲು ಅಗತ್ಯವಾದ ನಾವೀನ್ಯತೆ, ಪ್ರಯೋಗಶೀಲತೆ ಹಾಗೂ ನಿರಂತರ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕಿದೆ. ಕಾರ್ಪೊರೇಟ್ ಮತ್ತು ವಾಣಿಜ್ಯ ಸಂಸ್ಥೆಗಳೂ ಒಳಗೊಂಡಂತೆ ಎಲ್ಲ ಸಂಸ್ಥೆಗಳು ಯಾವ ರೀತಿ ತಮ್ಮನ್ನು ತಾವು ಸಾಮೂಹಿಕವಾಗಿ ನಿರಂತರವಾದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಗ್ಗೆ ಪೀಟರ್ ಸೆಂಜೆ ಎಂಬ ಅಮೆರಿಕದ ಎಂಜಿನಿಯರ್ ಮತ್ತು ಉಪನ್ಯಾಸಕರು ಸುಂದರ ವಾಗಿ ಪ್ರತಿಪಾದಿಸಿದ್ದಾರೆ. ಇಲ್ಲಿ ಕಲಿಕೆ ಎಂದಾಕ್ಷಣ ಪುಸ್ತಕ ಅಥವಾ ಗ್ರಂಥಗಳನ್ನು ಓದುವ ಮೂಲಕ ಹೆಚ್ಚು ಮಾಹಿತಿ ಸಂಗ್ರಹದಲ್ಲಿ ತೊಡಗುವುದು ಎಂದು ಭಾವಿಸಬೇಕಿಲ್ಲ. ಯಾವ ಸಂಸ್ಥೆಯು ತನ್ನ ಭವಿಷ್ಯದ ನಿರ್ಮಾಣಕ್ಕಾಗಿ ತನ್ನ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸಿಕೊಳ್ಳುತ್ತದೋ ಅಂತಹ ಸಂಘಟನೆಯನ್ನು ಕಲಿಕಾ ಸಂಘಟನೆ ಅಥವಾ ಕಲಿಕಾ ಸಂಸ್ಥೆ ಎನ್ನಬಹುದೆಂದು ಸೆಂಜೆ ಅಭಿಪ್ರಾಯಪಡುತ್ತಾನೆ.
ವಾಸ್ತವವಾಗಿ ಹೆಚ್ಚಿನ ಶಾಲೆ ಮತ್ತು ಕಾಲೇಜುಗಳು ವಿದ್ಯಾರ್ಥಿ ಕೇಂದ್ರಿತವಾದ ನಾವೀನ್ಯತೆ, ಪ್ರಯೋಗಶೀಲತೆಯ ಪ್ರಯತ್ನಗಳ ಕೊರತೆಯಿಂದ ಬಳಲುತ್ತಿವೆ. ವಿದ್ಯಾರ್ಥಿಗಳನ್ನು ಪ್ರೇರೇಪಿಸುವ, ಸಾಧನೆಯ ಕಿಡಿ ಹೊತ್ತಿಸುವ ಶಿಕ್ಷಕರ ಸಂಖ್ಯೆ ಹೆಚ್ಚಿಲ್ಲ.
ಶಾಲೆ ಮತ್ತು ಕಾಲೇಜುಗಳ ಕಥೆ ಈ ರೀತಿ ಯಾದರೆ ಇವುಗಳನ್ನು ಪೋಷಿಸಬೇಕಾದ ಮೇಲಿನ ಸ್ತರದ ಸಂಸ್ಥೆಗಳು ಅನುದಾನ ಬಿಡುಗಡೆ ಮತ್ತು ಮಾಹಿತಿ ಸಂಗ್ರಹ, ರವಾನೆಯನ್ನು ಮಾಡುವ ಕಚೇರಿಗಳಾಗಿ ಮಾತ್ರ ಉಳಿದು ಕೊಳ್ಳುವ ಜೊತೆ ಶಾಲೆ ಮತ್ತು ಕಾಲೇಜುಗಳನ್ನೂ ಸಹ ಮಾಹಿತಿ ಸಲ್ಲಿಸುವ ಕಚೇರಿಗಳನ್ನಾಗಿ ಯಶಸ್ವಿಯಾಗಿ ಮಾರ್ಪಡಿಸುವ ಕಾರ್ಯವನ್ನು ಮಾಡುತ್ತಿವೆ.
ಶಿಕ್ಷಕರು ಮತ್ತು ಅಧ್ಯಾಪಕರು ವಿದ್ಯಾರ್ಥಿ ಗಳಲ್ಲಿ ಕಲಿಕೆಯ ಗುಣಮಟ್ಟ ಹಾಗೂ ಜೀವನ ಕೌಶಲಗಳ ಮೈಗೂಡಿಸಿಕೊಳ್ಳುವಿಕೆಗೆ ಅಗತ್ಯವಾದ ನಿರಂತರ ಅಧ್ಯಯನಶೀಲತೆಯ ಮನೋಧರ್ಮ ವನ್ನು ಹೊಂದುವ ಅವಶ್ಯಕತೆ ಇದೆ. ಇದರ ಜೊತೆ ತಮ್ಮ ಸಹವರ್ತಿ ಅಧ್ಯಾಪಕರ ಜೊತೆ ತಮ್ಮ ಜ್ಞಾನ ಮತ್ತು ಅನುಭವಗಳನ್ನು ಪರಸ್ಪರ ಹಂಚಿ ಕೊಳ್ಳುವುದರ ಜೊತೆಗೆ ಸೃಜನಶೀಲ ಪ್ರಯೋಗಗಳಿಗೆ ತಮ್ಮನ್ನು ತಾವು ಮುಕ್ತವಾಗಿ ತೆರೆದುಕೊಳ್ಳುವಂತೆ ಮಾಡುವ ಮೂಲಕ ಶಾಲೆ ಮತ್ತು ಕಾಲೇಜುಗಳಲ್ಲಿ ಕಲಿಕೆಯ ಸಂಸ್ಕೃತಿಯನ್ನು ಪಸರಿಸುವಂತೆ ಮಾಡುವ ತುರ್ತು ಅಗತ್ಯ ಇದೆ. ಶಾಲೆ ಮತ್ತು ಕಾಲೇಜುಗಳು ಒಂದು ತಂಡವಾಗಿ ತಾವು ಸಾಗಬೇಕಾದ ದೃಷ್ಟಿಯನ್ನು ತಾವೇ ಕಂಡುಕೊಂಡು, ಕಾರ್ಯೋನ್ಮುಖ ರಾಗಬೇಕಿದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫) ದಾಖಲೆಯು ಹೇಳಿದಂತೆ ಗುಣಮಟ್ಟ ಎನ್ನು ವುದು ಸಾಮರ್ಥ್ಯದ ಅಳತೆಗೋಲು ಮಾತ್ರ ಅಲ್ಲ, ಅದೊಂದು ಮೌಲ್ಯದ ಆಯಾಮವಾಗಿದೆ. ಶೈಕ್ಷ ಣಿಕ ಗುಣಮಟ್ಟವನ್ನು ಅಭಿವೃದ್ಧಿಗೊಳಿಸುವ ನಮ್ಮ ಪ್ರಯತ್ನವು ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಬೆಳೆಸುವ ಕ್ರಮಗಳ ಜೊತೆ ಜೊತೆಗೆ ಸಾಗಿದಲ್ಲಿ ಮಾತ್ರ ಯಶ ಕಾಣಲು ಸಾಧ್ಯವಿದೆ.
ಸಮಾನ ಶಿಕ್ಷಣ ವ್ಯವಸ್ಥೆಯ ಪರಿಣಾಮಕಾರಿ ಜಾರಿಯಿಂದ ಮಾತ್ರ ಹೋಲಿಸಬಹುದಾದ ಗುಣಮಟ್ಟದ ಶಿಕ್ಷಣವನ್ನು ದೇಶದ ಎಲ್ಲಾ ವಿಧದ ಶಾಲೆ, ಕಾಲೇಜುಗಳಲ್ಲಿ ಒದಗಿಸುವಂತೆ ಮಾಡಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ನಮ್ಮ ಶಾಲೆ ಕಾಲೇಜುಗಳನ್ನು ನಿಜಾರ್ಥದಲ್ಲಿ ಕಲಿಕೆಯ ಸಂಸ್ಥೆಗಳಾಗಿ ಪರಿವರ್ತಿಸಿದಲ್ಲಿ ಮಾತ್ರ ಜಾಗತಿಕ ಮಟ್ಟದಲ್ಲಿ ನಮ್ಮ ಶಾಲೆ ಕಾಲೇಜುಗಳು ಸ್ಪರ್ಧೆಯೊಡ್ಡಲು ಸಾಧ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.