ಬ್ಯಾಂಕಿಂಗ್ ನಿಯಂತ್ರಣ ಸಡಿಲಿಕೆ ಅಗತ್ಯ: ಬ್ರೌನ್ ಮುಂಬೈ, ಜ. 19 (ಪಿಟಿಐ)– ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗಾಗಿ ಭಾರತಕ್ಕೆ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಲು ಇಲ್ಲಿನ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಸಡಿಲಿಸಬೇಕಾದ ಅಗತ್ಯವಿದೆ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ರೊನಾಲ್ಡ್ ಬ್ರೌನ್ ಅವರು ಇಂದು ಇಲ್ಲಿ ಸಲಹೆ ಇತ್ತರು.
ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಅತ್ಯಾಧುನಿಕ ತಡೆರಹಿತ ಹಿಮಾಲಯ ಕೆ–10000 ವ್ಯಾಪ್ತಿಯ ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸಿ ಬ್ರೌನ್ ಅವರು ಮಾತನಾಡಿದರು. ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲು ನಿಯಂತ್ರಣಗಳಿಲ್ಲದ ಮುಕ್ತ ಮಾರುಕಟ್ಟೆ ಯುಗ ಆರಂಭವಾಗಬೇಕು ಎಂದರು.
ಕಾಶ್ಮೀರ: ಹಿಮಪಾತಕ್ಕೆ 200 ಬಲಿ ಜಮ್ಮು, ಜ. 19 (ಯುಎನ್ಐ, ಪಿಟಿಐ)– ಜಮ್ಮು– ಶ್ರೀನಗರ ಹೆದ್ದಾರಿಯಲ್ಲಿ ಇಂದು ಸಂಭವಿಸಿದ ಹಿಮಪಾತ, ನೀರ್ಗಲ್ಲು ಉರುಳುವಿಕೆ ಹಾಗೂ ಭೂಕುಸಿತದಿಂದ ಕನಿಷ್ಠ 200 ಜನರು ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಜನ ಹೂತು ಹೋಗಿದ್ದಾರೆ.
ಕೋಬೆ: ಬೆಂಕಿ– ಸತ್ತವರ ಸಂಖ್ಯೆ 4,000ಕ್ಕೂ ಅಧಿಕ ಟೋಕಿಯೊ, ಜ. 19 (ಪಿಟಿಐ, ಎಪಿ)– ಜಪಾನಿನ ಕೋಬೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 4 ಸಾವಿರಕ್ಕೆ ಏರಿದ್ದು, ನೂರು ಕಡೆ ಹೊಸದಾಗಿ ಬೆಂಕಿ ಹೊತ್ತಿಕೊಂಡಿದೆ.