ಬಸವೇಶ್ವರರಿಗೆ ಅಪಮಾನ: ಸಿಒಡಿ ತನಿಖೆಗೆ
ಹುಬ್ಬಳ್ಳಿ, ಫೆ. 8– ಶಹರದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನ ಮಾಡಲಾಯಿತೆಂದು ಆಪಾದಿಸಲಾಗಿರುವ ಘಟನೆಯ ತನಿಖೆಯನ್ನು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಸಿಒಡಿ ತನಿಖೆಗೆ ಒಪ್ಪಿಸಿದ್ದಾರೆ ಎಂಬುದಾಗಿ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಸಿಒಡಿ ತಂಡ ನಾಳೆ ಹುಬ್ಬಳ್ಳಿ ಶಹರಕ್ಕೆ ಬಂದು ಸ್ಥಳೀಯ ಪೊಲೀಸರಿಂದ ತನಿಖಾ ಕಾರ್ಯವನ್ನು ವಹಿಸಿಕೊಳ್ಳಲಿದೆ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಈಗಾಗಲೇ ಕೆಲವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.