ನವದೆಹಲಿ, ಜೂನ್ 12–ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎರಡು ದಶಕಗಳ ನಂತರ ನಡೆದ ಚುನಾವಣೆಯಲ್ಲಿ ಸೀತಾರಾಂ ಕೇಸರಿ ಅವರು ತಮ್ಮ ಇಬ್ಬರು ಪ್ರತಿಸ್ಪರ್ಧಿಗಳಿಗಿಂತ 5,343 ಅಧಿಕ ಮತಗಳನ್ನು ಗಳಿಸಿ ಇಂದು ಮೊದಲ ಸುತ್ತಿನ ಎಣಿಕೆಯಲ್ಲಿಯೇ ಆಯ್ಕೆಗೊಂಡರು.
ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಮತಗಳ ಎಣಿಕೆಯ ನಂತರ ರಾತ್ರಿ 8:30ರಲ್ಲಿ ಫಲಿತಾಂಶವನ್ನು ಪಕ್ಷದ ಚುನಾವಣಾ ಅಧಿಕಾರಿ ಆಸ್ಕರ್ ಫರ್ನಾಂಡೀಸ್ ಅವರು ಪ್ರಕಟಿಸಿದರು. ಒಟ್ಟು ಚಲಾಯಿಸಿದ ಮತಗಳು 7,557. ಇದರಲ್ಲಿ ಸೀತಾರಾಂ ಕೇಸರಿ ಅವರು ಗಳಿಸಿದ ಒಟ್ಟು ಮತ 882 ಮತ್ತು ರಾಜೇಶ್ ಪೈಲಟ್ ಅವರು ಗಳಿಸಿದ ಮತಗಳು 96 ಎಂದು ಮಾಹಿತಿ ನೀಡಿದರು.
ಹವಾಲ: ಕಮಲನಾಥ್ ಆರೋಪ ಮುಕ್ತ
ನವದೆಹಲಿ, ಜೂನ್ 12 (ಪಿಟಿಐ)– ಹವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷಿಯ ಅಭಾವದಿಂದಾಗಿ ದೆಹಲಿ ಕೋರ್ಟ್ ಕೇಂದ್ರದ ನಾಲ್ವರು ಮಾಜಿ ಸಚಿವರುಗಳಾದ ಬೂಟಾ ಸಿಂಗ್, ಕಮಲನಾಥ್, ಬಿ.ಡಿ. ಧಾಣ್ಕೆ ಮತ್ತು ಚಾಂದ್ ರಾಂ ಹಾಗೂ ಜೈನ್ ಸಹೋದರರನ್ನು ಆರೋಪಗಳಿಂದ ಮುಕ್ತಗೊಳಿಸಿದೆ.
‘ಈ ನಾಲ್ವರ ಪ್ರಕರಣಗಳಲ್ಲಿ ಕಾನೂನುಬದ್ಧ ಸಾಕ್ಷಿಗಳನ್ನಾಗಿ ಪರಿವರ್ತಿಸುವ ಮೇಲ್ನೋಟದ ಸಾಕ್ಷಿಗಳಿಲ್ಲ’ ಎಂದು ಇಂದು ತೀರ್ಪು ನೀಡಿದ ವಿಶೇಷ ನ್ಯಾಯಾಧೀಶ ವಿ.ಬಿ.ಗುಪ್ತಾ ಅವರು ತಿಳಿಸಿದರು.