ಚೆನ್ನೈ, ಏ. 13 (ಪಿಟಿಐ)– ಅವಿಶ್ವಾಸ ಗೊತ್ತುವಳಿ ಮಂಡನೆಯಾದರೆ ತಾನು ವಾಜಪೇಯಿ ಸರ್ಕಾರವನ್ನು ಬೆಂಬಲಿಸುವ ಇಂಗಿತವನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂದು ನೀಡುವುದರೊಡನೆ ದೆಹಲಿಯ ರಾಜಕೀಯ ಬಿಕ್ಕಟ್ಟು ಹೊಸ ಮಜಲನ್ನು ಪ್ರವೇಶಿಸಿತು.
ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕಠಿಣ ನಿಲುವು ವಹಿಸಿದ್ದ ಚೌತಾಲಾ ಅವರ ಪಕ್ಷವೂ ಇಂದು ನಿಲುವು ಸಡಿಲಿಸಿ ಕೆಲವು ಷರತ್ತುಗಳೊಡನೆ ಬೆಂಬಲ ನೀಡಲು ಸಿದ್ಧ ಎಂದು ತಿಳಿಸಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮುಂದುವರಿಯುವುದರಿಂದ ಉಂಟಾಗುವುದಕ್ಕಿಂತಲೂ ಹೆಚ್ಚಿನ ಅಪಾಯವು ಭ್ರಷ್ಟ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಂದ ದೇಶಕ್ಕಿದೆ ಎಂದು ಡಿಎಂಕೆ ಹೇಳಿತು.