ನವದೆಹಲಿ, ಮೇ 31– ಭೂ ಪರಿಮಿತಿ ರಾಷ್ಟ್ರದಾದ್ಯಂತ 10ರಿಂದ 18 ಸ್ಟ್ಯಾಂಡರ್ಡ್ ಎಕರೆಗಳವರೆಗೆ ಏಕರೂಪವಾಗಿ ಇರುವಂತೆ ವಿಧಿಸಬೇಕೆಂದು ಭೂ ಸುಧಾರಣೆ ಕುರಿತ ಒಂದು ತಂಡ ನೆನ್ನೆ ರಾತ್ರಿ ಬಹಳ ಹೊತ್ತಾದ ಮೇಲೆ ಆಖೈರ್ ನಿರ್ಧಾರ ತೆಗೆದುಕೊಂಡಿತೆಂದು ಯೋಜನಾ ಸಚಿವ ಸಿ.ಸುಬ್ರಹ್ಮಣ್ಯಂ ಬಹಿರಂಗಪಡಿಸಿದರು.
ಈ ಪರಿಮಿತಿಯು ಸರ್ಕಾರಿ ಮತ್ತು ಖಾಸಗಿ ನೀರಾವರಿ ಮೂಲಗಳ ಮೂಲಕ ಸಾಗುವಳಿ ಮಾಡುವ ಭೂಮಿಗಳೆರಡಕ್ಕೂ ಅನ್ವಯಿಸುವುದೆಂದು ಅವರು ತಿಳಿಸಿದರು.
ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನಿಲ್ಲಿಸಲು ಲೋಕಸಭೆ ಆಗ್ರಹ
ನವದೆಹಲಿ, ಮೇ 31– ರಾಷ್ಟ್ರಗೀತೆಗೆ ಜನತೆ ಅಗೌರವ ತೋರುತ್ತಿರುವ ದೃಷ್ಟಿಯಿಂದ ಚಿತ್ರಮಂದಿರಗಳಲ್ಲಿ ಗೀತೆ ನುಡಿಸುವುದನ್ನು ನಿಲ್ಲಿಸಬೇಕೆಂದು ಅನೇಕ ಸದಸ್ಯರು ಇಂದು ಲೋಕಸಭೆಯಲ್ಲಿ ಒತ್ತಾಯಪಡಿಸಿದರು.
ವಾರ್ತಾ ಇಲಾಖೆ ಸ್ಟೇಟ್ ಸಚಿವೆ ನಂದಿನಿ ಸತ್ಪಥಿ ಅವರು ಈ ವಾದವನ್ನು ಒಪ್ಪಲಿಲ್ಲ.