ರಾಜ್ಯ ಸಂಪುಟದ ನಿರ್ಧಾರ: ಸರ್ಕಾರ–ನೌಕರರಲ್ಲಿ ಸಮಾಲೋಚನೆಗಾಗಿ ಜಂಟಿ ಸಮಿತಿ ರಚನೆ
ಬೆಂಗಳೂರು, ಅ. 7– ಪರಸ್ಪರ ವಿಚಾರ ವಿನಿಮಯ ನಡೆಯಬೇಕೆಂಬ ಉದ್ದೇಶದಿಂದ ಸರ್ಕಾರದ ಹಾಗೂ ನೌಕರರ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಾಲೋಚನಾ ಸಮಿತಿಯೊಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.
ಈ ಸಮಾಲೋಚನಾ ಸಮಿತಿಯು ಸಲಹಾ ಮಂಡಳಿಯಾಗಿರುವುದೆಂದು,ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿಡಿ. ದೇವರಾಜ ಅರಸು ಅವರು ವಿವರಿಸಿದರು.
ನೌಕರರ ಕುಂದುಕೊರತೆಗಳು ಹಾಗೂ ಸರ್ಕಾರಿ ಸೇವೆಗೆ ಸಂಬಂಧಿಸಿದ ವಿಷಯಗಳನ್ನು ಈ ಸಮಿತಿ ಚರ್ಚಿಸುವುದು.
ಮೈಸೂರು, ಧಾರವಾಡ ಜಿಲ್ಲೆಗೂ ಕೈಗಾರಿಕೆ ಸ್ಥಾಪನೆಗೆ ಕೇಂದ್ರದ ಸಹಾಯಧನ ಕ್ರಮ ವಿಸ್ತರಣೆ
ಬೆಂಗಳೂರು, ಅ. 7– ರಾಯಚೂರು ಜಿಲ್ಲೆಯೇ ಅಲ್ಲದೆ ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಗಳಿಗೆ ಅವರ ಬಂಡವಾಳದಶೇ 10ರಷ್ಟು ಕೇಂದ್ರದಿಂದ ಸಹಾಯಧನವಾಗಿ ದೊರೆಯಲಿದೆ.
ಕೇಂದ್ರದ ಸಹಾಯಧನವನ್ನು ಇನ್ನೂ ಎರಡು ಜಿಲ್ಲೆಗಳಿಗೆ ಅನ್ವಯಿಸಲು ಯೋಜನಾ ಆಯೋಗ ಒಪ್ಪಿರುವುದನ್ನು ಕೈಗಾರಿಕೆ ಸಚಿವ ಶ್ರೀ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.