ಬೆಂಗಳೂರು, ಡಿ. 7– ಕಾವೇರಿ ನೀರು ವಿವಾದವನ್ನು ಹಾಗೂ ಯೋಜನೆಗಳಿಗೆ ಮಂಜೂರಾತಿ ಕೇಳುತ್ತಿರುವ ಮೈಸೂರುವಾದದ ನ್ಯಾಯವನ್ನು ಪ್ರಧಾನಿ ತಿಳಿದುಕೊಳ್ಳಲು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂಬ ಶ್ರೀ ವೀರೇಂದ್ರ ಪಾಟೀಲರ ಸಲಹೆಯನ್ನು ಪ್ರಧಾನಿ ಒಪ್ಪಲಿಲ್ಲ.
‘ಇಂಥ ಸಭೆಯನ್ನು ಕರೆದರೆ ನಾನು ಹಾಜರಾಗುತ್ತೇನೆ ಎಂದು ಹೇಳಿದೆ. ಆದರೆ, ಪ್ರಧಾನಿ ಪ್ರತಿಕ್ರಿಯೆ ನನ್ನ ಸಲಹೆಗೆ ಅನುಕೂಲವಾದುದಾಗಿರಲಿಲ್ಲ’ ಎಂದು ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿಯವರು ವರದಿಗಾರರಿಗೆ ತಿಳಿಸಿದರು.
ಗಡಿ: ಈ ತಿಂಗಳೇ ಕೇಂದ್ರದ ನಿರ್ಧಾರ?
ಬೆಂಗಳೂರು, ಡಿ. 7– ಸಂಸತ್ತಿನ ಪ್ರಸಕ್ತ ಅಧಿವೇಶನ ಅಂತ್ಯವಾಗುವುದರೊಳಗೆ ಕೇಂದ್ರ ಸರ್ಕಾರ ಗಡಿ ವಿವಾದದ ಬಗ್ಗೆ ತೀರ್ಮಾನ ಕೈಗೊಳ್ಳಬಹುದೆಂಬ ನಿರೀಕ್ಷೆಯ ಕಾರಣ, ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದಕ್ಕೆ ಹಾಕಿದ್ದಾರೆ.
ಸಂಸತ್ತಿನ ಪ್ರಸ್ತುತ ಅಧಿವೇಶನ ಮುಕ್ತಾಯವಾಗುವುದರೊಳಗೆ, ಕೇಂದ್ರ ಸರ್ಕಾರ ಗಡಿ ವಿವಾದದ ಬಗ್ಗೆ ಏನಾದರೂ ಒಂದು ನಿರ್ಧಾರ ಕೈಗೊಂಡು ಪ್ರಕಟಿಸುವುದಾಗಿ ಇಲ್ಲಿನ ರಾಜಕೀಯ ವಲಯಗಳಲ್ಲಿ ನಿರೀಕ್ಷಿಸಲಾಗಿದೆ.