ಆರು ಅಂಶಗಳ ಸೂತ್ರಕ್ಕೆ ಪ್ರತ್ಯೇಕತಾವಾದಿ ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿ ಸರ್ವಾನುಮತದ ಒಪ್ಪಿಗೆ
ಹೈದರಾಬಾದ್, ಅ. 1– ಪ್ರತ್ಯೇಕತಾವಾದಿ ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿಯು ಇಂದು ಐದೂವರೆ ಗಂಟೆಗಳ ಸುಧೀರ್ಘ ಚರ್ಚೆಯ ನಂತರ, ಆಂಧ್ರ ಸಮಸ್ಯೆಗೆ ಕೇಂದ್ರ ನೀಡಿರುವ ಆರು ಅಂಶಗಳ ಸೂತ್ರಕ್ಕೆ ಸರ್ವಾನುಮತದ ಅಂಗೀಕಾರ ನೀಡಿದೆ.
ಆಂಧ್ರ ಕಾಂಗ್ರೆಸ್ ಕ್ರಿಯಾ ಸಮಿತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಬಿ.ವಿ.ಸುಬ್ಬಾರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 70 ಮಂದಿ ವಿಧಾನಸಭಾ ಸದಸ್ಯರೂ 20 ಮಂದಿ ವಿಧಾನಪರಿಷತ್ತಿನ ಸದಸ್ಯರೂ 7 ಮಂದಿ ಸಂಸತ್ ಸದಸ್ಯರೂ ಜಿಲ್ಲಾ ಪರಿಷತ್ತಿನ ಒಬ್ಬ ಅಧ್ಯಕ್ಷರೂ 65 ಮಂದಿ ಪಂಚಾಯಿತಿ ಸದಸ್ಯರೂ ಹಾಜರಿದ್ದರು.
ನಿರ್ಣಯವನ್ನು ಆಂಧ್ರ ಕಾಂಗ್ರೆಸ್ ಕ್ರಿಯಾಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಕೃಷ್ಣಮೂರ್ತಿಯವರು ಮಂಡಿಸಿದರು.
ನಿರ್ಣಯವನ್ನು ಹರ್ಷೋದ್ಗಾರಗಳ ನಡುವೆ ಅಂಗೀಕರಿಸಲಾಯಿತು.